ಹೊಸದಿಗಂತ ವರದಿ ಹಾವೇರಿ :
ಯೋಗದಿಂದ ನಿರೋಗಿ, ಭಾರತ ವಿಶ್ವಕ್ಕೆ ಆರೋಗ್ಯ ಕೋಡುಗೆಯಾಗಿ ಯೋಗವನ್ನು ಕೊಡುಗೆಯಾಗಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಒಂದು ಕರೆಗೆ ವಿಶ್ವದ ಬಹುತೇಕ ರಾಷ್ಟ್ರಗಳು ಯೋಗವನ್ನು ಮಾಡುತಗಯಿವೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ದಲ್ಲಿ ಆಯೋಜಿಸಿದ್ದ ಗಿನ್ನೀಸ್, ವಿಶ್ವದಾಖಲೆ ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯರ ಯೋಗವನ್ನು ವಿಶ್ವದ ಅನೇಕ ರಾಷ್ಟ್ರಗಳು ಯೋಗದ ಮಹತ್ವವನ್ನು ಅರಿತು ತಮ್ಮ ನಿತ್ಯದ ಭಾಗವಾಗಿ ಅಳವಡಿಸಿಕೊಳ್ಳುತ್ತಿದ್ದು ಭಾರತೀಯರಾದ ನಾವೆಲ್ಲರೂ ಪ್ರತಿ ನಿತ್ಯವೂ ಯೋಗವನ್ನು ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಗಿನ್ನೀಸ್, ವಿಶ್ವ ದಾಖಲೆಯ ಯೋಗಥಾನ್ ಜರುಗಿದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಲ್ಲದೆ ಸಾರ್ವಜನಿಕರು ಉತ್ಸಾಹದಿಂದ ಭಾಗಿಗಳಾಗಿದ್ದರು. ಅಂದಾಜು 12 ಸಾವಿರಕ್ಕೂ ಅಧಿಕ ಜನತೆ ಪಾಲ್ಗೊಂಡಿದ್ದರು.
ಭಾನುವಾರ ಬೆಳಿಗ್ಗೆ 6 ಗಂಟೆಯಿಂದಲೇ ನಗರವಲ್ಲದೆ ಜಿಲ್ಲೆಯಾದ್ಯಂತ ದಟ್ಟವಾದ ಮಂಜು ಕವಿದಿತ್ತು. ಕ್ರೀಡಾಂಗಣದಲ್ಲಿ 10-15 ದೂರ ಇದ್ದವರೂ ಸಹ ಕಾಣದಷ್ಟು ಮಂಜು ಕವಿದಿತ್ತು ಹೀಗಾಗಿ ಕಾರ್ಯಕ್ರಮವನ್ನು ಸ್ವಲ್ಪ ವಿಳಂಬವಾಗಿ ಪ್ರಾರಂಭಿಸಲಾಯಿತು.
ಯೋಗಾಥಾನ್ ಕಾರ್ಯಕ್ರಮ ಮುಕ್ತಾಯವಾದರೂ ಇನ್ನೂ ಮಂಜು ಕಂಡುಬಂದಿತು. ಬೆಳಿಗ್ಗೆ ಬಿಸಿಲಿನ ತಾಪ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ದಣಿವಾಗಲಿಲ್ಲ. ವಯೋವೃದ್ಧರಿಗೂ ಆಯಾಸವಾಗದೇ ಯೋಗಾಥಾನ್ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಶಾಸಕ ನೆಹರು ಓಲೇಕಾರ ಚಪ್ಪಾಳೆ ತಟ್ಟುವ ಮೂಲಕ ಚಾಲನೆ ನೀಡಿದರು. ಯೋಗಾಥಾನ್ ನಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ಸಹ ಚಪ್ಪಾಳೆ ತಟ್ಟುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಸಿಇಒ ಮಹಮ್ಮದ್ ರೋಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಸಿ ಶಿವಾನಂದ ಉಳ್ಳೆಗಡ್ಡಿ, ಜಿಪಂ ಅಧಿಕಾರಿ ಜಾಫರ್ ಸುತಾರ, ವಾರ್ತಾಧಿಕಾರಿ ರಂಗನಾಥ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಡಿಡಿ ಆರ್.ವಿ. ಚಿನ್ನಿಕಟ್ಟಿ ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.