ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 12ರಂದು ವಿವೇಕಾನಂದ ಜನ್ಮದಿನದಿಂದ ಆರಂಭಿಸಿ ಜನವರಿ 26ರವರೆಗೆ ಸಮರ್ಥ ಭಾರತ ಸಂಘಟನೆಯು ‘ಉತ್ತಮನಾಗು, ಉಪಕಾರಿಯಾಗು’ ಎಂಬ ಸಕಾರಾತ್ಮಕತೆಯನ್ನು ಪಸರಿಸುವ ಅಭಿಯಾನವನ್ನೇ ಹಮ್ಮಿಕೊಂಡಿದೆ. ವಿವೇಕಾನಂದರ ವಿಚಾರಗಳು, ಸೇವೆಯ ಆಯಾಮಗಳು, ಸಮಾಜವನ್ನು ಉತ್ತಮವಾಗಿಸುವ ನಿಟ್ಟಿನಲ್ಲಿ ಚಿಂತನೆ ಈ ಎಲ್ಲ ವಿಷಯಗಳ ಮೇಲೆ ಪ್ರತಿದಿನ ಉಪನ್ಯಾಸ-ಸಂವಾದಗಳಿರುತ್ತವೆ.
ಜತೆಗೆ, ವಿವೇಕಾನಂದರ ಸ್ಫೂರ್ತಿಯನ್ನು ಜನರಲ್ಲಿ ಮರು ಉದ್ದೀಪಿಸುವ ನಿಟ್ಟಿನಲ್ಲಿ ವಿವೇಕ ರಥ ಎಂಬ ಸಿಂಗರಿಸಿದ ವಾಹನವು ವಿವಿಧ ಪ್ರದೇಶಗಳಿಗೆ ತೆರಳುತ್ತಿದೆ. ಸಂಸ್ಥೆಗಳು, ಶಿಕ್ಷಣ ಕೇಂದ್ರಗಳು ಈ ರಥವನ್ನು ಎದುರುಗೊಂಡು ವಿವೇಕಾನಂದರ ಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.