ಹೊಸದಿಗಂತ ವರದಿ ಮಡಿಕೇರಿ:
ಈತನಿಗೆ ಕಿವಿ ಕೇಳುವುದಿಲ್ಲ, ಆಕೆಗೆ ಮಾತು ಬರುವುದಿಲ್ಲ ಆದರೆ ಇವರಿಬ್ಬರ ವಿವಾಹ ಮಹೋತ್ಸವ ನೂರಾರು ಮಂದಿಯ ಸಮ್ಮುಖದಲ್ಲಿ ಅದ್ಧೂರಿಯಾಗಿ ಭಾನುವಾರ ಜರುಗಿತು. ಕುಶಾಲನಗರ ಸಮೀಪದ ಕೊಪ್ಪ ಗ್ರಾಪಂ ವ್ಯಾಪ್ತಿಯ ಗುಡ್ಡೇನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ವಿಕಲ ಚೇತನರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೀಗೆಹೊಸೂರು ಗ್ರಾಮದ ಶ್ರೀನಿವಾಸ್ ಹಾಗೂ ಭಾಗ್ಯಮ್ಮ ದಂಪತಿಗಳ ಪುತ್ರ, ಕೃಷಿಕ ಟಿ.ಸಿ.ಧನಂಜಯ ಮತ್ತು ಬೈಲುಕುಪ್ಪೆ ಬಳಿಯ ಲಕ್ಷ್ಮಿಪುರ ಗ್ರಾಮದ ಕೆ.ರಮೇಶ್ ಮತ್ತು ಪುಷ್ಪಾ ದಂಪತಿಗಳ ಪುತ್ರಿ ಬಿ.ಎಂ.ಅಂಜಲಿ ಹಿರಿಯರ ಸಮ್ಮುಖದಲ್ಲಿ ಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಗುಡ್ಡೇನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಮದುವೆಯಾದರು.
ಇವರಿಬ್ಬರ ವಿವಾಹ ಕಾರ್ಯಕ್ರಮಕ್ಕೆ ರಾಜ್ಯ ಅಂಗವಿಲಕರ ಪರಿಷತ್ತು ಅಧ್ಯಕ್ಷ ಡಿ.ಕೆ.ಸುರೇಶ್ ಕುಮಾರ್ ರೂ.ಹತ್ತು ಸಾವಿರ ಧನ ಸಹಾಯ ಮಾಡಿ ವಿಹಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ಮಾತನಾಡಿದ ಅವರು, ಹುಟ್ಟು ವಿಕಲಚೇತನರು ಪರಸ್ಪರ ಒಪ್ಪಿ ವಿವಾಹವಾಗುತ್ತಿರುವುದು ಸಂತೋಷ ತಂದಿದೆ. ಅಲ್ಲದೆ ಇದೊಂದು ವಿಶೇಷ ವಿವಾಹವಾಗಿದೆ. ನೂರಾರು ಮದುವೆಗಳಲ್ಲಿ ಪಾಲ್ಗೊಂಡಿದ್ದೇನೆ ಆದರೆ ವಧುವರರಲ್ಲಿ ಒಬ್ಬರು ವಿಕಲಚೇತನರು ಹಾಗೂ ಚನ್ನಾಗಿರುವ ಹುಡುಗ, ಹುಡಿಗಿಯರು ವಿವಾಹವಾಗಿದ್ದಾರೆ. ಆದರೆ ಇಂದು ಅಪಾರ ಜನರ ಸಮ್ಮುಖದಲ್ಲಿ ನಡೆದ ವಿವಾಹ ಸಮಾಜಕ್ಕೆ ಮಾದರಿಯಾಗಿದೆ. ನವದಂಪತಿಗಳಿಗೆ ಭಗವಂತ ಆರ್ಶೀವಾದಿಸಲಿ ಎಂದು ಶುಭಹಾರೈಸಿದರು.