ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಪೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ ಕಬಳಿಸಿ ದಾಖಲೆ ಬರೆದ ಮೊಹಮ್ಮದ್ ಸಿರಾಜ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಗೆಲವಿನ ರೂವಾರಿ ಮೊಹಮ್ಮದ್ ಸಿರಾಜ್ ಪಂದ್ಯದಲ್ಲಿ ಮಾತ್ರವಲ್ಲ, ಪಂದ್ಯದ ಬಳಿಕವೂ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್ ಸಿರಾಜ್, ಪ್ರಶಸ್ತಿ ಮೊತ್ತವನ್ನು ಶ್ರೀಲಂಕಾ ಗ್ರೌಂಡ್ ಸ್ಟಾಫ್ಗೆ ನೀಡಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೊಹಮ್ಮದ್ ಸಿರಾಜ್, ಬಹುಮಾನ ಮೊತ್ತವನ್ನು ಶ್ರೀಲಂಕಾದ ಗ್ರೌಂಡ್ ಸಿಬ್ಬಂದಿಗಳಿಗೆ ನೀಡುವುದಾಗಿ ಘೋಷಿಸಿದರು. ಶ್ರೀಲಂಕಾದಲ್ಲಿನ ಬಹುತೇಕ ಎಲ್ಲಾ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಆದರೆ ಲಂಕಾ ಗ್ರೌಂಡ್ ಸಿಬ್ಬಂದಿ ಸತತವಾಗಿ ಕೆಲಸ ಮಾಡಿದ್ದಾರೆ. ಪಂದ್ಯ ಮತ್ತೆ ಆರಂಭಗೊಳ್ಳುವಂತೆ ಮಾಡಿದ್ದಾರೆ. ಅವರಿತ ಪರಿಶ್ರಮದ ಮೂಲಕ ಪಂದ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಸಿರಾಜ್ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಏಷ್ಯಾಕಪ್ ಪಂದ್ಯ ಆಯೋಜಿಸಿದ ಕಾರಣಕ್ಕೆ ಬಿಸಿಸಿಐ ಹಾಗೂ ಏಷ್ಯಾ ಕ್ರಿಕೆಟ್ ಮಂಡಳಿ ತೀವ್ರ ಟೀಕೆಗೆ ಗುರಿಯಾಗಿತ್ತು. ಶ್ರೀಲಂಕಾದಲ್ಲಿ ಮಳೆ ಸಮಯ ಅನ್ನೋದು ಗೊತ್ತಿದ್ದರೂ ಭಾರತದ ಒತ್ತಡದ ಮೇರೆಗೆ ಪಂದ್ಯ ಆಯೋಜಿಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು.
ಮೊಹಮ್ಮದ್ ಸಿರಾಜ್ ತಮ್ಮ ಪಂದ್ಯ ಶ್ರೇಷ್ಠ ಮೊತ್ತ ಸಿಬ್ಬಂದಿಗಳಿಗೆ ವಿತರಿಸಿದರೆ, ಇದಕ್ಕೂ ಮೊದಲು ಏಷ್ಯಾ ಕ್ರಿಕೆಟ್ ಸಮಿತಿ ಅಧ್ಯಕ್ಷ ಜಯ್ ಶಾ, 50,000 ಅಮೆರಿಕನ್ ಡಾಲರ್ ಮೊತ್ತ ಹಣವನ್ನು ಕೊಲೊಂಬೊ ಕ್ರೀಡಾಂಗಣ ಸಿಬ್ಬಂದಿಗಳಿಗೆ ಘೋಷಿಸಿದ್ದರು.