ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನೀರಿನ ಕೊರತೆ ಇದೆ. ಹಲವು ಪ್ರದೇಶಗಳಲ್ಲಿ ನೀರು ಪಡೆಯಲು ಹತ್ತಾರು ಕಿ.ಮೀ.ಗಟ್ಟಲೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಗದಗ-ಬೆಟಗೇರಿ ನೀರಿನ ಪೈಪ್ ಒಡೆದು ಕುಡಿಯುವ ನೀರು ಮನೆಗಳಿಗೆ ನುಗ್ಗಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಕುಡಿಯುವ ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ನುಗ್ಗಿದೆ.
ಪ್ರವಾಹದಂತೆ ರಾತ್ರಿಯಿಡೀ ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದೆ. ಗದಗ-ಬೆಟಗೇರಿ ಅವಳಿ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಒಡೆದು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ, ಧಾನ್ಯಗಳು ನೀರು ಪಾಲಾಗಿದೆ.
ನೀರು ನುಗ್ಗಿದ ಪರಿಣಾಮ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತ ಹಾಗೂ ಗದಗ ನಗರಸಭೆ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳಿನಿಂದ ಪೈಪ್ ಸೋರುತ್ತಿದೆ. ಈ ಕುರಿತು ಡಿಸಿ, ಪೌರಾಯುಕ್ತರು, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇಂದು ನದಿಯಿಂದ ನೀರು ಹರಿಸುವಾಗ ಪೈಪ್ ಒಡೆದಿದೆ ಎಂದು ಗ್ರಾಮದ ನಿವಾಸಿಗಳು ದೂರಿದ್ದಾರೆ.