ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ವೇಳೆ ಸ್ಪೋಟಕ ಮಾಹಿತಿಯೊಂದು ಬಯಲಾಗಿದೆ.
ರಾಷ್ಟ್ರೀಯ ತನಿಖಾ ದಳದ(NIA) ತನಿಖೆಯಲ್ಲಿ ಆರೋಪಿಗಳು ಐಟಿ ಪಾರ್ಕ್ ಗಳಲ್ಲಿ ಸ್ಪೋಟಿಸಲು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕೋಲ್ಕತ್ತಾದಲ್ಲಿ ಸೆರೆಸಿಕ್ಕ ಅಬ್ದುಲ್ ಮತಿನ್ ತಾಹ ಹಾಗೂ ಮುಸಾವಿರ್ ಹುಸೇನ್ನ ವಿಚಾರಣೆ ವೇಳೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ಐಟಿ ಪಾರ್ಕ್ಗಳನ್ನು (IT Park) ಟಾರ್ಗೆಟ್ ಮಾಡಿದ್ದ ಆರೋಪಿಗಳು ದೊಡ್ಡ ಸಾಫ್ಟ್ವೇರ್ ಕಂಪನಿಯನ್ನು ಸ್ಫೋಟ ಮಾಡಲು ಆರಂಭದಲ್ಲಿ ಪ್ಲ್ಯಾನ್ ಮಾಡಿದ್ದರು. ಯಾವುದಾದರೂ ಕಂಪನಿಯನ್ನು ಸ್ಫೋಟ ಮಾಡಿದರೆ ವಿದೇಶಿ ಬಂಡವಾಳ ಹೂಡಿಕೆದಾರರು (FDI) ಭಾರತಕ್ಕೆ (India) ಹೂಡಿಕೆ ಮಾಡಲು ಬರುವುದಿಲ್ಲ. ಇದರಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತದೆ ಎಂದು ಭಾವಿಸಿ ಬಾಂಬ್ ಸ್ಫೋಟಿಸಲು ತಯಾರಿ ನಡೆಸಿದ್ದರು.
ಆದ್ರೆ ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತು ಈ ಪ್ಲ್ಯಾನ್ ಕೈ ಬಿಟ್ಟು ಟೆಕ್ಕಿಗಳು ಹೆಚ್ಚು ಸೇರುವ ಜಾಗವನ್ನು ಟಾರ್ಗೆಟ್ ಮಾಡಿದ್ದರು. ಅಂತಿಮವಾಗಿ ಇವರು ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್ಫೀಲ್ಡ್ ಬಳಿ ಇರುವ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿ ಬಾಂಬ್ ಸ್ಫೋಟ ಮಾಡಿದ್ದಾರೆ ಎಂಬ ವಿಚಾರ ಎನ್ಐಎ ಮೂಲಗಳಿಂದ ತಿಳಿದು ಬಂದಿದೆ.