ಜನ್ಮದಿನದಂದು ಗಿಡಗಳನ್ನು ನೆಟ್ಟು ಬೆಳೆಸಿ: ವಿದ್ಯಾರ್ಥಿಗಳಿಗೆ ಶಿಕ್ಷಕಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ಡಾ ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ, ಜಾಗತಿಕ ತಾಪಮಾನ ಏರಿಕೆ ಹಾಗೂ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು.

ರಾಷ್ಟ್ರಪತಿಗಳಾಗಿ 2 ವರ್ಷಗಳ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಅವರು, ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.

ಈ ವೇಳೆ ಶಾಲೆಯ 9 ತರಗತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಮುರ್ಮು ಅವರು, ಹವಾಮಾನ ಬದಲಾವಣೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆಯ ಕುರಿತು ಬೋಧನೆ ಮಾಡಿದರು. ಅಲ್ಲದೆ, ಮರ-ಗಿಡ ನೆಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮರಗಳ ನೆಡಬೇಕು. ನೀರು ವ್ಯರ್ಥ ಮಾಡಬಾರದು. ಮಳೆನೀರು ಕೊಯ್ಲು ಮೂಲಕ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಜೊತೆಗೆ ವಾಯು ಮಾಲಿನ್ಯ ಹಾಗೂ ಮಾಲಿನ್ಯ ಕಡಿಮೆ ಮಾಡುವ ಮಾರ್ಗಗಳ ಕುರಿತಂತೆ ಹಾಗೂ ಪ್ರಧಾನಿ ಮೋದಿ ಅವರು ಪ್ರಾರಂಭಿಸಿದ ‘ಏಕ್ ಪೆಡ್ ಮಾ ಕೆ ನಾಮ್’ ಉಪಕ್ರಮದ ಬಗ್ಗೆ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ಮರವನ್ನು ನೆಡುವಂತೆಯೂ ಹೇಳಿದರು.

ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ವೇಳೆ ಮಕ್ಕಳೊಂದಿಗೆ ಮಕ್ಕಳಾದ ರಾಷ್ಟ್ರಪತಿಗಳು, ವಿದ್ಯಾರ್ಥಿಗಳ ಆಸೆ, ಆಕಾಂಕ್ಷೆ ಹಾಗೂ ಅವರು ಇಷ್ಟಪಡುವ ವಿಷಯಗಳನ್ನು ಕೇಳಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ವಿಜ್ಞಾನಿ, ವೈದ್ಯರಾಗುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ನಿಮ್ಮೊಂದಿಗಿದ್ದ ಸಮಯ ಸಾಕಷ್ಟು ಸಂತಸ ತಂದಿದೆ. ನಿಮ್ಮೆಲ್ಲರಿಂದ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿತು. ನೀವು 9 ನೇ ತರಗತಿಯಲ್ಲಿ ಓದುತ್ತಿದ್ದು, ಜಾಗತಿಕ ತಾಪಮಾನದ ಪ್ರಭಾವದ ಬಗ್ಗೆ ಚೆನ್ನಾಗಿ ತಿಳಿದಿರುತ್ತೀರಿ. ನೀವು ದೊಡ್ಡವರಾದ ನಂತರ ಜಾಗತಿಕ ತಾಪಮಾನ ಕಡಿಮೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!