ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಯಲ್ಲಿ ಮೌನ ಮುರಿದಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸಹಜ ಪರಿಸ್ಥಿತಿಯನ್ನು ತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಹಿಂಸಾಚಾರ ಕ್ಷೀಣಿಸಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಶಾಲೆಗಳು ಪುನರ್ ಆರಂಭವಾಗಿವೆ. ಮರಳಿ ಸಂಪೂರ್ಣ ಶಾಂತ ಪರಿಸ್ಥಿತಿಗೆ ತರಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಸುಮಾರು 11,000 ಎಫ್ ಐಆರ್ ದಾಖಲಿಸಲಾಗಿದೆ. ಮಣಿಪುರದ ಬಹುತೇಕ ಕಡೆಗಳಲ್ಲಿ ಸಹಜ ಪರಿಸ್ಥಿತಿವೇರ್ಪಟ್ಟಿದೆ. ಪ್ರವಾಹದ ಪರಿಸ್ಥಿತಿ ಉಂಟಾದಾಗ ಎರಡು ಎನ್ ಡಿಆರ್ ಎಫ್ ತಂಡವನ್ನು ಕಳುಹಿಸಲಾಗಿತ್ತು ಎಂದು ಸದನಕ್ಕೆ ತಿಳಿಸಿದ ಪ್ರಧಾನಿ, ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದಕ್ಕಾಗಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಪ್ರಧಾನಿ, ಒಂದು ದಿನ ನಿಮ್ಮನ್ನು ತಿರಸ್ಕರಿಸುತ್ತಾರೆ. ಮಣಿಪುರ ವಿಷಯವನ್ನಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದರು.