ಹೊಸದಿಗಂತ ವರದಿ, ಚಿಕ್ಕಮಗಳೂರು:
ತಮಿಳುನಾಡಿಗೆ ಮೆಡಿಕಲ್ ಕಾಲೇಜು ಕೊಟ್ಟಿರುವುದನ್ನು ಟೀಕಿಸುವವರು ಮಹಾನ್ ಮೂರ್ಖರು, ಕರ್ನಾಟಕಕ್ಕೂ ಮೆಡಿಕಲ್ ಕಾಲೇಜು ಕೊಟ್ಟಿದ್ದಾರೆ. ಇಡೀ ದೇಶಕ್ಕೂ ಕೊಟ್ಟಿದ್ದಾರೆ. ತಮಿಳುನಾಡಿಗೆ ಹೋಗಿ ಮೋದಿ ಏನೂ ಕೊಟ್ಟಿಲ್ಲ ಎಂದು ಇದೇ ಜನ ಮಾತನಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಯಾವ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಆ ಎಲ್ಲಾ ಜಿಲ್ಲೆಗಳಲ್ಲಿ ಕಾಲೇಜು ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಜಾಗ ಕೊಟ್ಟು ಬೇಗ ಪ್ರಸ್ತಾವನೆ ಸಲ್ಲಿಸಿದವರಿಗೆ ಬೇಗ ಮೆಡಿಕಲ್ ಕಾಲೇಜು ಸಿಕ್ಕಿದೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ, ಹಾವೇರಿ, ಸೇರಿ ೫ ಮೆಡಿಕಲ್ ಕಾಲೇಜುಗಳನ್ನು ನಮ್ಮ ರಾಜ್ಯಕ್ಕೆ ಕೊಡಲಾಗಿದೆ. ಅವೆಲ್ಲವೂ ರಾಜ್ಯ ಮತ್ತು ಕೇಂದ್ರದ ಸಹಯೋದಗಲ್ಲೇ ಮಂಜೂರಾಗಿವೆ ಎಂದರು.
೫೦ ವರ್ಷ ಕಾಂಗ್ರೆಸ್ ಕೊಟ್ಟಿದ್ದನ್ನು ಕೇವಲ ೭ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ರೈಲ್ವೇ, ರಾಷ್ಟ್ರೀಯ ಹೆದ್ದಾರಿ, ಏರ್ಪೋರ್ಟ್ ಎಲ್ಲವೂ ಬಂದಿವೆ. ತಮಿಳುನಾಡು, ಕೇರಳದಲ್ಲಿ ಒಂದೂ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. ಆದರೆ ನರೇಂದ್ರ ಮೋದಿ ಅವರು ಅಭಿವೃದ್ಧಿ ವಿಚಾರದಲ್ಲಿ ಯಾರಿಗೂ ತಾರತಮ್ಯ ಮಾಡುವುದಿಲ್ಲ. ತಾರತಮ್ಯದ ರಾಜಕಾರಣ ಮಾಡುವುದು ಕಾಂಗ್ರೆಸ್ ಸಂಸ್ಕೃತಿ, ಅಭಿವೃದ್ಧಿ ದೃಷ್ಠಿಯಿಂದ ದೇಶದ ಎಲ್ಲಾ ಜನರನ್ನು ಒಂದೇ ಸಮನಾಗಿ ನೋಡುವುದು ಬಿಜೆಪಿ ಮತ್ತು ನರೇಂದ್ರ ಮೋದಿ ಮಾತ್ರ ಎಂದರು.