ಶಬರಿಮಲೆ ಮುಖ್ಯ ಅರ್ಚಕರಾಗಿ ಪಿ.ಎನ್.ಮಹೇಶ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮೂವಾಟ್ಟುಪ್ಪುಳ ಎನನಲ್ಲೂರ್‌ನ ಪುಟಿಲ್ಲತ್ ಮಾನಾದ ಪಿ.ಎನ್.ಮಹೇಶ್ ಅವರನ್ನು ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಮೇಲ್ಶಾಂತಿ(ಮುಖ್ಯ ಅರ್ಚಕ)ಯಾಗಿ ಒಂದು ವರ್ಷದ ಅವಧಿಗೆ ನೇಮಕಗೊಳಿಸಲಾಗಿದೆ.

ಇವರು ಪ್ರಕೃತ ತ್ರಿಶೂರ್‌ನ ಪರಮೇಕ್ಕಾವು ಭಗವತಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಾಗೆಯೇ , ಗುರುವಾಯೂರ್ ಬಳಿಯ ಪೂಂಗತ್ ಮಾನಾದ ಪಿ.ಜಿ.ಮುರಳಿ ನಂಬೂದಿರಿ ಅವರನ್ನು ಶಬರಿಮಲೆಗೆ ಹೊಂದಿಕೊಂಡಿರುವ ಶ್ರೀಮಾಳಿಕಪ್ಪುರಂ ದೇವಿ ದೇವಸ್ಥಾನದ ಮೇಲ್ಶಾಂತಿಯಾಗಿ ನೇಮಕಗೊಳಿಸಲಾಗಿದೆ.ಇವರು ಕಳೆದ ೨೫ವರ್ಷಗಳಿಂದ ಹೈದರಾಬಾದ್‌ನ ಸೊಮಾಜಿಗುಡದಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ನೇಮಕಾತಿಯನ್ನು ಶ್ರೀಕೋವಿಲ್(ದೇವಸ್ಥಾನ)ನ ಮುಂದೆ ಚೀಟಿ ಎತ್ತುವ ಮೂಲಕ ಘೋಷಿಸಲಾಯಿತು.ತಿರುವಾಂಕೂರ್ ದೇವಸ್ವಂ ಮಂಡಳಿ(ಟಿಡಿಬಿ) ಸಂದರ್ಶನ ನಡೆಸಿದ ಬಳಿಕ ಅರ್ಚಕರ ಸಮಿತಿಯೊಂದು ಇವರ ಹೆಸರನ್ನು ಒಳಗೊಂಡ ಪಟ್ಟಿಯೊಂದನ್ನು ನೀಡಿತ್ತು. ಪಂದಳಂ ರಾಜಮನೆತನದ ವೈದೇಹಿ ವರ್ಮ(ಶಬರಿಮಲೆ) ಮತ್ತು ನಿರುಪಮ ಜಿ.ವರ್ಮ(ಮಾಳಿಗಪ್ಪುರಂ)ಅವರು ಟಿಡಿಬಿ ಅಕಾರಿಗಳ ಉಪಸ್ಥಿತಿಯಲ್ಲಿ ಚೀಟಿ ಎತ್ತಿದರು.

ಶಬರಿಮಲೆ ದೇವಳವು ತುಲಾ ಮಾಸದ ಪೂಜೆಗಾಗಿ ಮಂಗಳವಾರ ತೆರೆದುಕೊಂಡಿತು.ಮುಖ್ಯ ಅರ್ಚಕ ಕೆ.ಜಯರಾಮನ್ ನಂಬೂದಿರಿ ಅವರು ತಂತ್ರಿವರ್ಯ ಕಂಟರಾರು ಮಹೇಶ್ ಮೊಹನಾರು ಅವರ ಸಮ್ಮುಖ ನಡೆ ತೆರೆದರು.ಅನಂತರ ಅವರು ಮಾಳಿಗಪ್ಪುರಂ ದೇವಳದ ಕೀಲಿ ಕೈಯ್ಯನ್ನು ಮುಖ್ಯ ಅರ್ಚಕ ವಿ.ಹರಿಹರನ್ ಅವರಿಗೆ ನೀಡಿದರು. ಅನಂತರ ಭಕ್ತರು ದೇವರ ದರ್ಶನಗೈದರು.
ಅ.೨೨ರವರೆಗೂ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.ಉದಯಾಸ್ತಮಾಯ ಪೂಜ , ಪಡಿಪೂಜಾ, ಕಳಭಾಭಿಷೇಕಮ್ ಮತ್ತು ಪುಷ್ಪಾಭಿಷೇಕಮ್ ಸೇರಿದಂತೆ ವಿವಿಧ ಪೂಜಾ ಸೇವೆಗಳನ್ನು ಮಾಡಿಸಲು ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!