ಹೊಸದಿಗಂತ ವರದಿ,ಶಿವಮೊಗ್ಗ:
ರಾಷ್ಟ್ರದ್ರೋಹಿ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮ ಚಟುವಟಿಕೆ ಪತ್ತೆ ಮಾಡಿರುವುದು ಸ್ವಾಗತಾರ್ಹ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಷ್ಟ್ರದ್ರೋಹಿ ಭಯೋತ್ಪಾದನಾ ಕೃತ್ಯ ಮಾಡಬೇಡಿ ಎಂದು ಕೇಂದ್ರ ಸರ್ಕಾರ ಎಲ್ಲರಿಗೂ ತಿಳಿ ಹೇಳಿತ್ತು. ಆದರೂ ಭಯೋತ್ಪಾದನಾ ಚಟುವಟಿಕೆ, ಗೋ ಸಾಗಾಣಿಕೆ, ಗೋ ಸಾಗಾಣಿಕೆ ತಡೆಯಲು ಹೋದ ಹಿಂದು ಯುವಕರ ಮೇಲೆ ಹತ್ಯೆ ಯತ್ನ, ಬಾಂಬ್ ತಯಾರಿಕೆ ಮಾಡುತ್ತಿದ್ದರು. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದರು.
ಪಿಎಫ್ಐ ಮತ್ತು ಎಸ್ಡಿಪಿಐ ಕೃತ್ಯವನ್ನು ಎಲ್ಲಾ ರಾಷ್ಟ್ರಭಕ್ತ ಮುಸ್ಲಿಮರು ಖಂಡಿಸಬೇಕು. ಕಾಂಗ್ರೆಸ್ ಪಕ್ಷವಂತೂ ಈ ವಿಷಯದ ಬಗ್ಗೆ ಬಾಯಿ ಬಿಟ್ಟಿಲ್ಲ. ದಾಳಿ ಸ್ವಾಗತಾರ್ಹ ಎಂದು ಹೇಳಲೂ ಆಗುತ್ತಿಲ್ಲ. ಹಿಂದಿನಿಂದಲೂ ಕಾಂಗ್ರೆಸ್ ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಟ್ಟುಕೊಂಡು ಬಂದಿದೆ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ನಡುವೆ ಒಡಕು ಮೂಡಿಸುವುದೇ ಇವರ ಕೆಲಸ ಎಂದು ಕುಟುಕಿದರು.