ಹೊಸದಿಗಂತ ವರದಿ ಸಕಲೇಶಪುರ:
ತಾಲೂಕಿನ ಸಬಾ ಹೋಬಳಿಯ ದೋಣಿಗಲ್ ಗ್ರಾಮದ ಸುಗ್ಗಿ ಕಟ್ಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು, ಅಕ್ರಮವಾಗಿ ಜೂಜಾಟ ಆಡುತ್ತಿದ್ದ ತಂಡದ ಮೇಲೆ ನಗರ ಪೊಲೀಸರು ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಿದ್ದಾರೆ.
ಘಟನೆಯ ವಿವರ:
ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವನರಾಜು ವಿ. ಅವರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ, ದೋಣಿಗಲ್ ಗ್ರಾಮದ ಸುಗ್ಗಿ ಕಟ್ಟೆ ಹತ್ತಿರ 5 ರಿಂದ 6 ಜನರ ಗುಂಪೊಂದು ಅಕ್ರಮವಾಗಿ ‘ಅಂದರ್-ಬಾಹರ್’ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು.
ಪೊಲೀಸ್ ಕಾರ್ಯಾಚರಣೆ:
ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ವನರಾಜು ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಹಠಾತ್ ದಾಳಿ ನಡೆಸಿದ್ದಾರೆ. ಈ ವೇಳೆ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದ್ದು, ಜೂಜಾಟಕ್ಕೆ ಬಳಸಿದ್ದ ನಗದು ಹಾಗೂ ಇನ್ನಿತರೆ ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಕ್ರಮ ಚಟುವಟಿಕೆಗಳ ವಿರುದ್ಧ ನಮ್ಮ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕರು ಇಂತಹ ಕೃತ್ಯಗಳಲ್ಲಿ ತೊಡಗಬಾರದು, ಎಂದು ಪೊಲೀಸ್ ಮೂಲಗಳು ಎಚ್ಚರಿಸಿವೆ. ಇದ್ದರೆ 112 ಕರೆಮಾಡಿ ತಿಳಿಸಲು ಮನವಿ ಮಾಡಿದೆ .
ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.



