ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಲ್ಲೆಡೆ ಪೊಲೀಸ್ ಪೊಲೀಸ್ ಪೊಲೀಸ್… ಅಲ್ಲಲ್ಲಿ ಸೈರನ್, ಮೈಕ್ ಮೂಲಕ ಅನೌನ್ಸ್ಮೆಂಟ್, ಏಕಾಏಕಿ ಅಂಗಡಿ ಮಾಲಕರಿಗೆ ಬಂದ್ ಮಾಡುವಂತೆ ಸೂಚನೆ, ಅಲ್ಲಲ್ಲಿ ವಾಹನಗಳ ತಪಾಸಣೆ, ನಗರದಾದ್ಯಂತ ಗಸ್ತು…
ಇದು ಕಳೆದ ರಾತ್ರಿ ಮಂಗಳೂರು ನಗರದಲ್ಲಿ ಕಂಡುಬಂದ ದೃಶ್ಯಗಳು. ಇದಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ಪೋಸ್ಟ್!
ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಕರಾವಳಿ ಉದ್ವಿಗ್ನಗೊಂಡಿರುವ ನಡುವೆಯೇ ‘ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುತ್ತೇವೆ’ ಎಂದು ಹಿಂದು ಕಾರ್ಯರ್ತ ಭರತ್ ಕುಮ್ಡೇಲು ಅವರಿಗೆ ನೇರ ಎಚ್ಚರಿಕೆ ನೀಡಿದ ಈ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮಂಗಳೂರು ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು.
ಪೊಲೀಸರು ನಗರದುದ್ದಕ್ಕೂ ಗಸ್ತು ಹೆಚ್ಚಿಸಿದ್ದರಲ್ಲದೆ, ಹೋಟೆಲ್, ಪಬ್, ಬಾರ್ ಸಹಿತ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ರಾತ್ರಿ 9:30ರ ಒಳಗೆ ಬಂದ್ ಮಾಡಿಸಿದ್ದರು. ನಗರದಲ್ಲಿದ್ದ ನಾಗರಿಕರನ್ನೂ ವಾಪಸ್ ಕಳುಹಿಸುವ ಕಾರ್ಯವಾಗಿತ್ತು. ಆದರೆ ಇದೆಲ್ಲಾ ಏನು? ಏನಾಗುತ್ತಿದೆ ಎಂಬ ಅರಿವಿಲ್ಲದೆ ನಾಗರಿಕರು ಅಕ್ಷರಶಃ ಕಂಗಾಲಾಗಿ ಫೋನ್ ಮೂಲಕ ‘ದಾದಾಂಡ್… ಓಲು ದಾದಾಂಡ್…’ ಎಂದು ಪರಸ್ಪರ ವಿಚಾರಿಸಿಕೊಳ್ಳುತ್ತಿರುವುದು ಕಂಡುಬಂತು.