ಹೊಸದಿಗಂತ ವರದಿ ಬಳ್ಳಾರಿ:
ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿ ಸರಳ ಸಜ್ಜನಿಕೆಗೆ ಹೆಸರಾಗಿದ್ದು, ಕ್ಷೇತ್ರದ ಪ್ರತಿಯೊಬ್ಬ ಪ್ರಬುದ್ಧ ಮತದಾರರು ಅಭಿವೃದ್ಧಿ ನಿರೀಕ್ಷಿಸಿ, ಬಿಜೆಪಿ ಬೆಂಬಲಿಸಿ ಆಶೀರ್ವದಿಸಬೇಕು ಎಂದು ಕೇಂದ್ರ ಇಂಧನ ಹಾಗೂ ಬೃಹತ್ ಕೈಗಾರಿಕಾ ಸಚಿವ ಕಿಶನ್ ಪಾಲ್ ಗುರ್ಜರ್ ಮನವಿ ಮಾಡಿದರು.
ನಗರದ 11ನೆ ವಾರ್ಡ್ ಪ್ರದೇಶದ ಸಭಾಪತಿ ಬೀದಿಗಳಲ್ಲಿ ಮನೆ ಮನೆಗೆ ತೆರಳಿ ಮಂಗಳವಾರ ಮತಯಾಚಿಸಿ ಮಾತನಾಡಿದರು. ರಾಜ್ಯ ಹಾಗೂ ದೇಶದ ಅಭಿವೃದ್ದಿ ನಿರೀಕ್ಷಿಸಿ ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಿ ಆಶೀರ್ವದಿಸಬೇಕು. ಕಾಂಗ್ರೆಸ್ನವರ ಸುಳ್ಳು ಭರವಸೆ, ಬಣ್ಣದ ಮಾತುಗಳಿಗೆ ಮರುಳಾಗದೇ, ಅವರ ಯಾವುದೇ ಅಮಿಷಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.
ವಿಜಯನಗರ-ಬಳ್ಳಾರಿ ಉಭಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಅವಧಿಯಲ್ಲಿ ಕೋಟ್ಯಾಂತರ ರೂ. ಅನುದಾನ ಬಿಡುಗಡೆಯಾಗಿದ್ದು, ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿಶೇಷವಾಗಿ ಅಭಿವೃದ್ಧಿ ಹರಿಕಾರ ಎನ್ನುವ ಕೀರ್ತೀಗೆ ಭಾಜನರಾದ ಶಾಸಕ, ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿ ಅವರು ನಗರದ ಅಭಿವೃದ್ಧಿಗೆ ಅವರದೇ ಆದ ಕನಸುಗಳನ್ನು ಇಟ್ಟುಕೊಂಡಿದ್ದು, ನನಸಾಗಿಸಲು ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಕೇಳಿಕೊಂಡರು.
ಅಭ್ಯರ್ಥಿ ಜಿ ಸೋಮಶೇಖರ್ ರೆಡ್ಡಿ ಅವರೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಜೈನ್ ಸಮುದಾಯದ ಪ್ರಮುಖರು, ಭಾಜಪ ಕಾರ್ಯಕರ್ತರು, ವಾರ್ಡ್ ಪ್ರಮುಖರು ಇತರರು ಉಪಸ್ಥಿತರಿದ್ದರು.