ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಅಂಬಾಲಾದಲ್ಲಿಯೂ ವಾಯುದಾಳಿ ಎಚ್ಚರಿಕೆ ನೀಡಲಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ರಾತ್ರಿ ಎಂಟರಿಂದ ಬೆಳಗ್ಗೆ ಆರರವರೆಗೆ ವಿದ್ಯುತ್ ವ್ಯತ್ಯಯದ ನಿರ್ಧಾರ ಮಾಡಲಾಗಿದೆ. ಅಷ್ಟೇ ಅಲ್ಲದೇ ನಾಳೆಯೂ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ, ವಾಯುಪಡೆಯು ಚಂಡೀಗಢ ಮತ್ತು ಹರಿಯಾಣದ ಅಂಬಾಲದಲ್ಲಿ ಸಂಭಾವ್ಯ ಡ್ರೋನ್ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದೆ. ಅದರ ನಂತರ ಸೈರನ್ ಮೊಳಗಿಸಲಾಗಿದೆ. ಈ ಸಮಯದಲ್ಲಿ ಜನರು ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಲಾಗಿತ್ತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಇಂದು ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಅಂಬಾಲದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಈ ಸಮಯದಲ್ಲಿ ನಗರದ ಲೈಟ್ಗಳನ್ನು ಆಫ್ ಮಾಡಲಾಗುತ್ತದೆ. ಆದ್ದರಿಂದ, ಜನರು ತಮ್ಮ ಪ್ರಮುಖ ಕೆಲಸವನ್ನು ಹಗಲಿನಲ್ಲಿಯೇ ಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ನಿಮ್ಮ ಫೋನ್ ಚಾರ್ಜ್ ಆಗಿರಲಿ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸೈರನ್ ಸದ್ದು ಮಾಡಿದ ತಕ್ಷಣ ನಿಮ್ಮ ಮನೆಯೊಳಗೆ ಹೋಗಿ ಎಂದು ತಿಳಿಸಿದೆ.