ಹೊಸದಿಗಂತ ವರದಿ, ಶಿವಮೊಗ್ಗ:
ಕೋಮು ದ್ವೇಷಕ್ಕೆ ಬಲಿಯಾಗಿರುವ ಹರ್ಷ ನೆನಪಿನಲ್ಲಿ ನಿಧಿಸ್ಥಾಪನೆ ಮಾಡುವಂತೆ ಹರ್ಷ ಕುಟುಂಬಸ್ಥರು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಮುಚ್ಚಿದ ಲಕೋಟೆಯಲ್ಲಿ ಇಡಿಗಂಟು ನೀಡಿದ್ದಾರೆ.
ಒಂದೆಡೆ ಮಗನನ್ನು, ಸಹೋದರನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿ ಹರ್ಷ ಕುಟುಂಬ ಇದೆ. ಇದೇ ಹೊತ್ತಿನಲ್ಲಿ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಕೆಲಸವನ್ನೂ ಕುಟುಂಬ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ.
ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮದೇ ಕೇರಿಯ ಯುವಕರಿಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ತೋರಿದ್ದರು. ಶುಕ್ರವಾರ ಮನೆಗೆ ಆಗಮಿಸಿದ್ದ ಪ್ರಮೋದ್ ಮುತಾಲಿಕ್ ಜೊತೆ ಹರ್ಷ ಸಾವಿನ ಕುರಿತು ಚರ್ಚಿಸಿದರು. ಇದೇ ವೇಳೆ ಹರ್ಷ ಮುತಾಲಿಕ್ ಅವರ ಜೊತೆ ನಿಕಟ ಒಡನಾಟ ಹೊಂದಿದ್ದನ್ನು ಸ್ಮರಿಸಿದರು. ಬಳಿಕ ಹರ್ಷ ಹೆಸರಿನಲ್ಲಿ ನಿಧಿಸ್ಥಾಪನೆ ಮಾಡುವಂತೆ ಆರ್ಥಿಕ ಇಡಿಗಂಟನ್ನು ನೀಡಿದರು.