ಹೊಸ ದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯ ಮತ್ತೊಂದು ಅಪರಾಧ ಪ್ರಕರಣ ಎನ್ ಐ ಎ( ರಾಷ್ಟ್ರೀಯ ತನಿಖಾ ದಳ) ಗೆ ಹಸ್ತಾಂತರ ಆಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಖುದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಸುಳಿವು ನೀಡಿದ್ದಾರೆ.
ಆಗಸ್ಟ್ 15 ರಂದು ನಗರದ ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಜಬೀವುಲ್ಲಾ ಅಲಿಯಾಸ್ ಚರ್ಬಿಯನ್ನು ಎನ್ ಐ ಎ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಜ್ಞಾನೇಂದ್ರ , ಜಬೀವುಲ್ಲಾ ಚರಿತ್ರೆ ಭಯಾನಕ ಆಗಿದೆ. ಆತ ಹಲವಾರು ಹಲವಾರು ಉಗ್ರ ಸಂಘಟನೆಯ ಜೊತೆಗೆ ಸಂಬಂಧ ಹೊಂದಿರುವುದು ತನಿಖೆ ವೇಳೆ ಗೊತ್ತಾಗಿದೆ. ಹಾಗಾಗಿ ಎನ್ ಐ ಎ ತನಿಖೆಗೆ ವಹಿಸಲಾಗುವುದು ಎಂದು ತಿಳಿಸಿದರು.
ಯುಎಪಿಎ ಪ್ರಕರಣ ದಾಖಲು
ಆಗಸ್ಟ್ 15 ರಂದು ನಗರದ ಎಎ ವೃತ್ತದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಳವಡಿಕೆ ಸಂಬಂಧ ಗಲಾಟೆ ನಡೆದಿತ್ತು. ಅದೇ ಸಮಯದಲ್ಲಿ ಗಾಂಧಿ ಬಜಾರ್ ನಲ್ಲಿ ರಾಜಸ್ಥಾನ ಮೂಲದ ಪ್ರೇಮ್ ಸಿಂಗ್ ಗೆ ಚೂರಿಯಿಂದ ಇರಿಯಲಾಗಿತ್ತು. ಆರೋಪಿ ಜಬೀವುಲ್ಲಾ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಜಬೀವುಲ್ಲಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.
ಇತ್ತೀಚಿಗೆ ಆತನ ಮನೆ, ಎಸ್ ಡಿ ಪಿಐ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿದ್ದರು. ಅದರಲ್ಲಿ ಉಗ್ರ ಸಂಘಟನೆ ಜೊತೆಗೆ ಸಂಬಂಧ ಇರುವುದು ಕಂಡು ಬಂದಿತ್ತು ಎನ್ನಲಾಗಿದೆ.