ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ ಲೋಕಸಭೆ ಕದನಕ್ಕೆ ವೇದಿಕೆ ಸಜ್ಜಾಗಿದೆ. ಅಖಾಡಕ್ಕಿಳಿಬೇಕಾದ ಅಭ್ಯರ್ಥಿಗಳು ಯಾರು ಎಂಬುದನ್ನು ನಿರ್ಧರಿಸಲು ಆಯ್ಕೆ ಪ್ರಕ್ರಿಯೆ ಕಸರತ್ತು ನಡೆಸಲಾಗುತ್ತಿದೆ. ರಾಜ್ಯದಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರ್ಯ ತಂತ್ರಗಳು ಶುರುವಾಗಿದೆ.
ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ದೃಷ್ಟಿ ನೆಟ್ಟಿವೆ. ಹೀಗಾಗಿ ಅಭ್ಯರ್ಥಿಗಳನ್ನು ಅಳೆದು ತೂಗಿ ಅಖಾಡಕ್ಕಿಳಿಸಲು ದೆಹಲಿ ಅಂಗಳದಲ್ಲಿ ತಂತ್ರಗಳ ಲೆಕ್ಕಾಚಾರ ಶುರುವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಈ ಬಾರಿ 20 ಸ್ಥಾನ ಗೆಲ್ಲಲು ಪಣತೊಟ್ಟಿದೆ. ಇದಕ್ಕೆ ಟಕ್ಕರ್ ಕೊಡಲು ಬಿಜೆಪಿ ಕೂಡ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕು ಎಂಬುವ ಗುರಿ ಹೊಂದಿದೆ. ಆದ್ದರಿಂದ, ಅಳೆದುತೂಗಿ ಅಭ್ಯರ್ಥಿಯನ್ನು ಘೋಷಿಸಲು ಎರಡೂ ಪಕ್ಷಗಳು ತಯಾರಿ ನಡೆಸಿವೆ. ಈ ಹಿನ್ನೆಲೆಯಲ್ಲಿ ಇಂದು ದಿಲ್ಲಿಯಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂಬ ಮಾಹಿತಿ ಇದೆ.