ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ.20-22ರವರೆಗೆ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ನ.20ರಂದು ಮುರ್ಮು ಅವರು, ‘ಒಡಿಶಾದ ಬರಿಪದದಲ್ಲಿ ಅಖಿಲ ಭಾರತ ಸಂತಾಲಿ ಲೇಖಕರ ಸಂಘದ 36ನೇ ವಾರ್ಷಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ.
ಅದೇ ದಿನ ಅವರು ಕುಲಿಯಾನದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಸಹ ಉದ್ಘಾಟಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ನ.21 ರಂದು ಪಹಾದ್ಪುರ ಗ್ರಾಮದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟಿಸಲಿದ್ದಾರೆ. ತರುವಾಯ ಬದಂಪಹಾರ್ ರೈಲು ನಿಲ್ದಾಣಕ್ಕೆ ಭೇಟಿ ಅಲ್ಲಿ ಅವರು ಮೂರು ಹೊಸ ರೈಲು(ಬದಂಪಹಾರ್- ಟಾಟಾನಗರ, ಬದಂಪಹಾರ್-ರೂರ್ಕೆಲಾ ಎಕ್ಸ್ಪ್ರೆಸ್ ಮತ್ತು ಬದಂಪಹಾರ್-ಶಾಲಿಮಾರ್ ಎಕ್ಸ್ಪ್ರೆಸ್) ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಬಳಿಕ ಅವರು ಬದಂಪಹಾರ್-ಶಾಲಿಮಾರ್ ಎಕ್ಸ್ಪ್ರೆಸ್ನಲ್ಲಿ ಬದಂಪಹಾರ್ನಿಂದ ರೈರಂಗಪುರಕ್ಕೆ ಪ್ರಯಾಣಿಸುವರು. ಸಂಜೆ ಬುರ್ಲಾದ ವೀರ್ ಸುರೇಂದ್ರ ಸಾಯಿ ತಂತ್ರಜ್ಞಾನ ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ನ.22ರಂದು ಸಂಬಲ್ಪುರದ ಬ್ರಹ್ಮಾಕುಮಾರೀಸ್ ಸೇವಾಕೇಂದ್ರ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ ಅಭಿಯಾನ- ‘ನವ ಭಾರತಕ್ಕಾಗಿ ಹೊಸ ಶಿಕ್ಷಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ರಾಷ್ಟ್ರಪತಿ ಆಂಧ್ರಪ್ರದೇಶದ ಪುಟ್ಟಪರ್ತಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಶ್ರೀ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ನ 42ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.