ಹೊಸದಿಗಂತ ವರದಿ ಹಾಸನ :
ಇತ್ತೀಚಿನ ದಿನಗಳಲ್ಲಿ ರಾಜ್ಯದ ಅರ್ಚಕರು ಹಾಗೂ ದೇವಾಲಯಗಳು ಅನೇಕ ಕಾರಣಗಳಿಂದ ಸಂಕಷ್ಟಕ್ಕೆ ಅನುಭವಿಸುತ್ತಿದ್ದಾರೆ. ನಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ. 7 ಬುಧವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರು ಟೌನ್ ಹಾಲ್ನ ಸಮೀಪ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್.ದೀಕ್ಷಿತ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಹಿಂದೂ ದೇವಾಲಯಗಳಲ್ಲಿರುವ ಅರ್ಚಕರಿಗೆ ಸರ್ಕಾರ 5000 ರೂ ಗೌರವ ಧನ ನೀಡುತ್ತಿದ್ದು ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಈ ಹಿಂದೆ ಅರ್ಚಕರಿಗೆ ಸಾವಿರಾರು ಎಕರೆ ಜಮೀನುಗಳನ್ನು ನೀಡಲಾಗಿತ್ತು. ಆದರೆ ಬಳಿಕ ಅವೆಲ್ಲವನ್ನೂ ಸರ್ಕಾರ ವಾಪಾಸ್ ಪಡೆದಿದೆ. ಮಂಗಳಾರತಿ ತಟ್ಟೆಯ ಹಣದಿಂದ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರವು ನೀಡುತ್ತಿರುವ ಗೌರವ ಧನವನ್ನು ಕನಿಷ್ಠ 10 ಸಾವಿರಕ್ಕೆ ಏರಿಕೆ ಮಾಡಬೇಕು, ನಿವೃತ್ತಿ ನಿಯಮ ರದ್ದು ಸೇರಿದಂತೆ ನಮ್ಮ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಹಾಗೂ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ, ಆಗಮಿಕರ ಸಂಘ ಸಹಭಾಗಿತ್ವದೊಂದಿಗೆ ಈ ಸಮಾವೇಶ ಘಂಟಾನಾದ ಶೀರ್ಘಿಕೆ ಭಾಗ 2 ಹೆಸರಿನಲ್ಲಿ ಆಯೋಜಿಸಿದೆ. ಸಮಾವೇಶದಲ್ಲಿ ಮುಖ್ಯ ಮಂತ್ರಿಗಳು ಸೇರಿದಂತೆ ಸಂಪುಟದ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಧ್ಯಕ್ಷರಾದ ವೆಂಕಟಾಚಲಯ್ಯ, ಶ್ರೀನಿವಾಸ್, ಹಾಸನ ಜಿಲ್ಲಾ ಅಧ್ಯಕ್ಷ ಸೋಮಶೇಖರ್, ಸಂತೋಷ್, ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು.