ಪ್ರಧಾನಿ ಮೋದಿ ಪದವಿ ವಿಚಾರ: ಸಾಲು ಸಾಲು ಪ್ರಶ್ನೆ ಕೇಳಿದ ಅರವಿಂದ್ ಕೇಜ್ರಿವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಅವರ ಪದವಿ ವಿಚಾರದಲ್ಲಿ ಗುಜರಾತ್ ಹೈಕೋರ್ಟ್ ನೀಡಿದ ತೀರ್ಪಿನ ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಶುಕ್ರವಾರ ಗುಜರಾತ್ ಹೈಕೋರ್ಟ್ ನ ಆದೇಶದಲ್ಲಿ ಪ್ರಧಾನಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ದೇಶದ ಜನತೆ ವಿಚಾರಿಸುವಂತಿಲ್ಲ ಎಂಬ ಹೇಳಿದ್ದು, ಈ ಆದೇಶ ವಿರುದ್ಧ ಕೇಜ್ರಿವಾಲ್ ಗರಂ ಆಗಿದ್ದಾರೆ.

ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿರುವ ಕಾರಣ ಇಡೀ ದೇಶವೇ ಈ ಆದೇಶದ ಬಗ್ಗೆ ಅಚ್ಚರಿಪಟ್ಟಿದೆ. ಪ್ರಶ್ನೆಗಳನ್ನು ಕೇಳುವ ಮತ್ತು ಮಾಹಿತಿಯನ್ನು ಹುಡುಕುವ ಸ್ವಾತಂತ್ರ್ಯ ಇರಬೇಕು. ಯಾರಾದರೂ ಕಡಿಮೆ ಶಿಕ್ಷಣ ಪಡೆದರೆ ಅದು ಅಪರಾಧವಲ್ಲ. ಅನಕ್ಷರಸ್ಥರಾಗಿರುವುದು ಅಪರಾಧವಲ್ಲ, ಪಾಪವೂ ಅಲ್ಲ. ನಮ್ಮ ದೇಶದಲ್ಲಿ ತುಂಬಾ ಬಡತನವಿದೆ. ತಮ್ಮ ಮನೆಯ ಪರಿಸ್ಥಿತಿಗಳಿಂದಾಗಿ ಓದಲು ಸಾಧ್ಯವಾಗದ ಅನೇಕ ಜನರಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ತಾವು ಪ್ರಧಾನಿ ಮೋದಿ ಅವರ ಡಿಗ್ರಿ ವಿವರಗಳನ್ನು ಕೇಳಿದ್ದೇಕೆ ಎನ್ನುವುದನ್ನೂ ಅವರು ವಿವರಿಸಿದ್ದಾರೆ.

ನಮ್ಮ ದೇಶ ಸ್ವತಂತ್ರಗೊಂಡು 75 ವರ್ಷಗಳಾಗಿವೆ. ಇಂದು ಜನರಲ್ಲಿ ಸಾಕಷ್ಟು ಚಡಪಡಿಕೆ ಇದೆ, ದೇಶದ ಅಭಿವೃದ್ಧಿಯನ್ನು ಜನ ಬಯಸುತ್ತಿದ್ದಾರೆ. 21 ನೇ ಶತಮಾನದ ಯುವಕರು ಹಣದುಬ್ಬರ ಮತ್ತು ನಿರುದ್ಯೋಗದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ವಿದ್ಯಾವಂತರಾಗುವುದು ಬಹಳ ಮುಖ್ಯ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ನಮ್ಮ ಪ್ರಧಾನಿ ಹೇಳುವ ಹೇಳಿಕೆಗಳು ದೇಶದಲ್ಲಿ ತಳಮಳಕ್ಕೆ ಕಾರಣವಾಗಿದೆ. ಉದಾಹರಣೆಗೆ, ಮೋದಿ ಚರಂಡಿ ಗ್ಯಾಸ್‌ನಿಂದ ಚಹಾ ತಯಾರಿಸಬಹುದು ಎಂದು ಹೇಳಿದ್ದರು. ಬುದ್ಧಿಇದ್ದವರು, ವಿದ್ಯಾವಂತರು ಈ ರೀತಿ ಮಾಡತನಾಡೋದಿಲ್ಲ. ಮಳೆ ಬರುವಂತಿದ್ದರೆ, ಮೋಡಗಳಿದ್ದರೆ, ಅದರ ಹಿಂದೆ ಏರೋಪ್ಲೇನ್‌ಗಳು ಹೋದರೆ, ರೇಡಾರ್‌ಗಳು ಅವುಗಳನ್ನು ಹಿಡಿಯಲು ಸಾಧ್ಯವಿಲ್ಲ ಎನ್ನುತ್ತಾರೆ. ಇದನ್ನು ಕೇಳಿದವರು ಏನಂದುಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿಯ ಈ ಮಾತನ್ನು ದೇಶದ ಯುವಕರು ಕೇಳಿದಾಗ, ವಿಜ್ಞಾನದ ಬಗ್ಗೆ ನಮ್ಮ ಪ್ರಧಾನಿಗೆ ಎಷ್ಟು ಕಡಿಮೆ ತಿಳುವಳಿಕೆ ಇದೆ ಎಂದು ಅಂದುಕೊಳ್ಳುತ್ತಾರೆ. ಪ್ರಧಾನಿ ಕೆನಡಾಕ್ಕೆ ಹೋಗಿದ್ದ ಸಂದರ್ಭದಲ್ಲಿ ಇದೇ ರೀತಿಯಲ್ಲಿ ಏನೂ ಮಾತನಾಡಿದ್ದರು. ಪ್ರಧಾನಿಯ ಇಂಥ ಮಾತುಗಳಿಂದ ನಮ್ಮ ದೇಶ ಇಡೀ ಜಗತ್ತಿನ ಮುಂದೆ ಮುಜುಗರ ಅನುಭವಿಸಿದೆ. ಮಕ್ಕಳನ್ನು ಉದ್ದೇಶಿಸಿ ಮಾತನಾಡುವ ವೇಳೆ, ಜಗತ್ತಿನಲ್ಲಿ ಹವಾಮಾನ ಬದಲಾವಣೆ ಅನ್ನೋದೇ ಇಲ್ಲ ಎಂದಿದ್ದರು. ಆದರೆ, ಹವಾಮಾನ ಬದಲಾವಣೆ ಅನ್ನೋದು ಜಾಗತಿಕ ಸತ್ಯ. . ಜಾಗತಿಕ ತಾಪಮಾನ ಏನೂ ಅಲ್ಲ ಎಂದು ನಮ್ಮ ಪ್ರಧಾನಿ ಹೇಳಿದರೆ ನಾವು ಅದರ ಮೇಲೆ ಹೇಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯ ಮಾತುಗಳನ್ನು ಕೇಳಿದಾಗ ನಮ್ಮ ದೇಶದ ಪ್ರಧಾನಮಂತ್ರಿ ಎಷ್ಟು ಓದಿದ್ದಾರೆ? ಯಾವ ಪದವಿ ಪಡೆದಿದ್ದಾರೆ ಎನ್ನುವ ಕುತೂಹಲಗಳು ಏಳುವು ಸಹಜ. ಒಂದು ಸಂದರ್ಭದಲ್ಲಿ ಪ್ರಧಾನಿ ಮೋದಿ ತಾವು ಹೆಚ್ಚಿ ಶಿಕ್ಷಿತರಲ್ಲ ಎನ್ನುತ್ತಾರೆ. ದೇಶದ ಪ್ರಧಾನಿ ಶಿಕ್ಷಿತರಾಗಿರುವುದು ಮುಖ್ಯವಲ್ಲವೇ? ಒಂದು ದಿನದಲ್ಲಿ ಅವರು ವಿಜ್ಞಾನ, ಆರ್ಥಿಕತೆಗೆ ಸಂಬಂಧಿಸಿದ ನೂರಾರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಧಾನಿಗೆ ಶಿಕ್ಷಣವಿಲ್ಲದಿದ್ದರೆ, ಅಧಿಕಾರಿಗಳು ಮತ್ತು ಇತರ ಜನರು ಎಲ್ಲಿ ಬೇಕಾದರೂ ಸಹಿ ಮಾಡಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.

ಇದರ ಬೆನ್ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಅರವಿಂದ್‌ ಕೇಜ್ರಿವಾಲ್‌ ಸಂಪೂರ್ಣವಾಗಿ ಹುಚ್ಚರಾಗಿ ಹೋಗಿದ್ದಾರೆ. ಅವರ ನೇರವಾಗಿ ಕೇಳ್ತಿದ್ದಾರೋ, ಪರೋಕ್ಷವಾಗಿ ಕೇಳ್ತಿದ್ದಾರೋ ಗೊತ್ತಿಲ್ಲ. ಆದರೆ, ಎಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದರೆ, ಸ್ವತಃ ಕೋರ್ಟ್‌ ಕೂಡ ಅವರಿಗೆ ಛೀಮಾರಿ ಹಾಕಿದೆ. ಅವರು ಬಳಸಿರುವ ಭಾಷೆ, ಶೈಲಿ ಮತ್ತು ದೇಹ ಭಾಷೆ ಅತ್ಯಂತ ಕೆಳಮಟ್ಟದ್ದು ಎಂದು ಟೀಕಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!