ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಮಂದಿರ(Ram mandir) ಆವರಣದಲ್ಲಿರುವ ಕುಬೇರ ಟೀಲಾ(Kuber Tila) ದೇಗುಲಕ್ಕೆ ಸೋಮವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅಲ್ಲಿ ಶಿವನಿಗೆ ಪೂಜೆ ಸಲ್ಲಿಸಿದರು.
‘ಜಲಾಭಿಷೇಕ’ ನೆರವೇರಿಸಿ ದೇವಾಲಯದ ಪ್ರದಕ್ಷಿಣೆ ಮಾಡಿದ್ದಾರೆ. ರಾಮ ಜನ್ಮಭೂಮಿ ಸಂಕೀರ್ಣದಲ್ಲಿರುವ ಕುಬೇರ್ ಟೀಲಾದಲ್ಲಿರುವ ಪುರಾತನ ಶಿವ ದೇವಾಲಯವನ್ನು ರಾಮ ಮಂದಿರವನ್ನು ನಿರ್ಮಿಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ನವೀಕರಿಸಲಾಗುತ್ತಿದೆ.
ಬಳಿಕ ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ‘ಜಟಾಯು’ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು. ಶ್ರೀರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಕುಬೇರ ಟೀಲಾ ಇದೆ. ಇದು ಸುಮಾರು ನೂರು ಅಡಿ ಎತ್ತರವಿರುವ ಈ ದಿಬ್ಬ ಮಣ್ಣು ಮತ್ತು ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಅಲ್ಲಿ ಕಾಮೇಶ್ವರ ಮಹಾದೇವನ ಹಳೆಯ ದೇವಾಲಯವಿದೆ.
ರಾಮಮಂದಿರ ನಿರ್ಮಾಣದ ಜೊತೆಗೆ ಟ್ರಸ್ಟ್ ಅದನ್ನು ನವೀಕರಿಸಿದೆ. ಈ ಸ್ಥಳಕ್ಕೆ ಕುಬೇರ ಆಗಮಿಸಿದ್ದ ಎಂದು ಹೇಳಲಾಗುತ್ತದೆ. ದಿಬ್ಬದ ಮೇಲೆ ಶಿವಲಿಂಗವನ್ನು ಸ್ಥಾಪಿಸಲಾಯಿತು. ನಂತರ ಜನರು ಗಣೇಶ, ಮಾತಾ ಪಾರ್ವತಿ, ಕಾರ್ತಿಕೇಯ, ನಂದಿ, ಕುಬೇರ ಸೇರಿದಂತೆ ಒಂಬತ್ತು ದೇವರು ಮತ್ತು ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.
ಕುಬೇರ ಟೀಲಾದ ಇತಿಹಾಸವೂ ಪ್ರಾಚೀನವಾದುದು. ಭಗವಾನ್ ರಾಮನ ಜನನಕ್ಕೂ ಮುಂಚೆಯೇ ಈ ದಿಬ್ಬ ಇತ್ತು ಎಂದು ನಂಬಲಾಗಿದೆ. ಕುಬೇರ ಟೀಲಾ ಅಯೋಧ್ಯೆಯ ಮಹಾಕಾವ್ಯಗಳಲ್ಲಿಯೂ ಉಲ್ಲೇಖಿತವಾಗಿದೆ. ಇದೊಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ರಾಮಲಲ್ಲಾ ಪ್ರತಿಷ್ಠಾಪನೆ ನಂತರ ಅದರ ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.