ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಮಾಚಲ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕುಲು ದಸರಾ ಇಂದಿನಿಂದ ಒಂದು ವಾರ ನಡೆಯಲಿದ್ದು, ಈ ಸಂಭ್ರಮಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾದರು.
ಧಾಲ್ಪುರದ ರಥ ಮೈದಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಭಗವಾನ್ ರಘುನಾಥರ ದರುಶನ ಪಡೆದರು. ಮೋದಿ ಅವರೊಂದಿಗೆ ಮುಖ್ಯಮಂತ್ರಿ ಜೈರಾಮ್ ಠಾಕೂರ್, ರಾಜ್ಯ ಬಿಜೆಪಿ ಅಧ್ಯಕ್ಷ ಸುರೇಶ್ ಕಶ್ಯಪ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ರಘುನಾಥರ ರಥಯಾತ್ರೆಯನ್ನು ವೀಕ್ಷಿಸಿದರು.
ಪ್ರಧಾನಿ ಮೋದಿ ಅವರಿಗೆ ಸಿಎಂ ಜೈರಾಮ್ ಠಾಕೂರ್ ಕುಲು ಟೋಪಿ ಮತ್ತು ಶಾಲು ನೀಡಿ ಗೌರವಿಸಿದರು. ಅದೇ ಸಮಯದಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಪ್ರಧಾನಿ ಮೋದಿ ಹಸ್ತಲಾಘವ ಮಾಡಿದರು.
ಕುಲು ದಸರಾ ಹಬ್ಬ
ಒಂದು ವಾರ ಕಾಲ ನಡೆಯುವ ಕುಲು ದಸರಾ ಹಬ್ಬವು ವಿಶಿಷ್ಟವಾಗಿದೆ. ಏಕೆಂದರೆ ಇದನ್ನು ದೇಶದ ಉಳಿದ ಭಾಗಗಳಲ್ಲಿ ದಸರಾ ಹಬ್ಬವು ಮುಗಿದ ನಂತರ ಆಯೋಜಿಸಲಾಗುತ್ತದೆ. ಈ ಅದ್ಭುತವಾದ ಹಬ್ಬದಲ್ಲಿ ದೇವಾನುದೇವತೆಗಳು ಸ್ವರ್ಗದಿಂದ ಭೂಮಿಗೆ ಬರುತ್ತಾರೆ ಎಂದು ಜನತೆ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ.
ದೇವರು ಮತ್ತು ದೇವತೆಗಳ ಮಹಾ ಕುಂಭ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಸರಾ, ಬೀಜ್ ಪೂಜೆ ಮತ್ತು ದೇವಿ ಹಿಡಿಂಬಾ, ಬಿಜ್ಲಿ ಮಹಾದೇವ್ ಮತ್ತು ಮಾತಾ ಭೇಖಲಿಯ ಸನ್ನೆಯನ್ನು ಸ್ವೀಕರಿಸಿದ ನಂತರವೇ ಈ ಉತ್ಸವ ಪ್ರಾರಂಭವಾಗುತ್ತದೆ. ನಂತರ ಭಗವಾನ್ ರಘುನಾಥರ ಪಲ್ಲಕ್ಕಿಯನ್ನು ಹೊರತೆಗೆಯಲಾಗುತ್ತದೆ.