ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಮ, ಹವನ ಪೂಜೆಯೊಂದಿಗೆ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
ಪೂಜಾ ವಿಧಿ-ವಿಧಾನಗಳಲ್ಲಿ ಪ್ರಧಾನಿ ಮೋದಿ ಜತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಹ ಇದ್ದಾರೆ. ಸುಮಾರು 1 ಗಂಟೆಯವರೆಗೂ ಪೂಜಾ-ಕೈಂಕರ್ಯ ನಡೆಯಲಿದೆ.
ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರಾಗಿದ್ದಾರೆ. ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್ ಅಥವಾ ರಾಜದಂಡವನ್ನು ಸಿದ್ಧಪಡಿಸುವ ಜವಬ್ದಾರಿಯನ್ನು ತಿರುವವಾಡುತುರೈ ಅಧೀನಮ್ ಅಥವಾ ಮಠಕ್ಕೆ ನೀಡಲಾಗಿತ್ತು. ಈ ಅಧೀಮನ್ 400 ವರ್ಷಗಳಷ್ಟು ಹಳೆಯದಾಗಿದೆ.
ಹೊಸ ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ವಿುಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಪಾಲ್ಗೊಂಡಿದ್ದಾರೆ.