ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆ ಪ್ರಚಾರದ ಅಬ್ಬರ ಜೋರಾಗಿ ಸಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರೀಯಾಂಕಾ ಗಾಂಧಿ ವಾದ್ರ ಹುಬ್ಬಳ್ಳಿಗೆ ಆಗಮಿಸಿದ್ದಾರೆ.
ಈ ವೇಳೆ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ರೋಡ್ ಶೋ ಮಾಡುವ ಮೂಲಕ ಮತಯಾಚಿಸಿದರು.
ಜೆ.ಎಸ್.ಎಸ್.ವಿದ್ಯಾಪೀಠದ ಬಳಿ ಹೆಲಿಕ್ಯಾಪ್ಟರ್ ನಿಂದ ಇಳಿದು ಮೆರವಣಿಗೆ ರಥ ಏರುವ ಮೂಲಕ ರೋಡ್ ಶೋ ಗೆ ಚಾಲನೆ ನೀಡಿದರು. ಬಳಿಕ ನೆರೆದ ಸಾವಿರಾರು ಜನರಿಗೆ ಕೈ ಎತ್ತಿ ನಮಸ್ಕರಿಸಿದ್ದು, ವಿಶೇಷವಾಗಿತ್ತು.
ಈ ವೇಳೆ ಕಾರ್ಯಕರ್ತರ ಕೈಯಲ್ಲಿ ಕಾಂಗ್ರೆಸ್ ಧ್ವಜ ರಾರಾಜಿಸಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಅವರತ್ತ ಕೈ ಬೀಸಿ ಖುಷಿಪಟ್ಟರು.