ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಯನಾಡ್ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಸ್ವ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚೆರುವಾಯಲ್ ರಾಮನ್ ಅವರ ಮನೆಯಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಕಳೆದಿದ್ದಾರೆ. ಬೀಜಗಳನ್ನು ಸಂರಕ್ಷಿಸಲಾಗಿರುವ ರೈತನ ಭತ್ತದ ಗದ್ದೆಗಳ ಮೂಲಕ ನಡೆದು ಅವರ ವಿಶಿಷ್ಟ ಕೃಷಿ ವಿಧಾನಗಳ ಬಗ್ಗೆ ತಿಳಿದುಕೊಂಡರು. ಜೊತೆಗೆ ರಾಮನ್ ಪ್ರಿಯಾಂಕಾಗೆ ಜನಪದ ಗೀತೆಗಳನ್ನು ಹೇಳಿಕೊಟ್ಟಿದ್ದಾರೆ.
ರಾಮನ್ ಅವರ ಮಾರ್ಗದರ್ಶನದಲ್ಲಿ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಬಿಲ್ಲು ಮತ್ತು ಬಾಣವನ್ನು ಹೊಡೆಯುವುದನ್ನು ಸಹ ಪ್ರತ್ನಿಸಿದ್ದಾರೆ.

ಸಾವಯವ ಮತ್ತು ಸುಸ್ಥಿರ ಕೃಷಿ ವಿಧಾನಗಳ ಮೂಲಕ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಬೆಳೆಸಿದ್ದಕ್ಕಾಗಿ ರಾಮನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರವಾಸದ ಆರಂಭದಲ್ಲಿ, ಪ್ರಿಯಾಂಕಾ ಗಾಂಧಿ ಮೈಲುಕುನ್ನು ಮತ್ತು ಪನಮರಂ ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು.
ಬಳಿಕ ಪ್ರಿಯಾಂಕಾ ಕೋಝಿಕ್ಕೋಡ್ನಲ್ಲಿ ಬರಹಗಾರ ಮತ್ತು ಭಾಷಾಶಾಸ್ತ್ರಜ್ಞ ಎಂ.ಎನ್. ಕರಸ್ಸೇರಿ ಅವರನ್ನು ಭೇಟಿ ಮಾಡಿದರು, ಮರ್ಕಜ್ ನಾಲೆಡ್ಜ್ ಸಿಟಿಯಲ್ಲಿ ವಿದ್ವಾಂಸ ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ಅವರನ್ನು ಭೇಟಿಯಾದರು. ಮಾನವ-ಪ್ರಾಣಿ ಸಂಘರ್ಷ, ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಅಡಿವರಂನಿಂದ ವಯನಾಡಿಗೆ ಬೈಪಾಸ್ನ ಅಗತ್ಯತೆಯ ಸಮಸ್ಯೆಗಳನ್ನು ಎತ್ತಿದ್ದ ತಮರಸ್ಸೇರಿ ಬಿಷಪ್ ರೆಮಿಜಿಯೋಸ್ ಇಂಚನಾನಿಯಿಲ್ ಅವರ ಜೊತೆ ಸಂಸದೆ ಮಾತುಕತೆ ನೀಡಿದ್ದಾರೆ.
10 ದಿನಗಳ ಪ್ರವಾಸದ ಸಮಯದಲ್ಲಿ ಕ್ಷೇತ್ರದ ಜನರೊಡನೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ಆದಷ್ಟು ಬೇಗ ಅದಕ್ಕೆ ಪರಿಹಾರ ಕಂಡುಕೊಳ್ಳು ಪಯತ್ನಿಸುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ.