ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ, ರಾಜ್ಯದಲ್ಲಿ ಏನಿದೆ? ಏನಿಲ್ಲ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಮಾಡಲಾಗಿದೆ. ಆದರೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಇಂದು ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದು, ಎಲ್ಲಾ ವ್ಯಾಪಾರ ಹಾಗೂ ಉದ್ಯಮ ಸಂಸ್ಥೆಗಳಿಗೆ ಬೆಂಬಲ ಕೋರಿದ್ದಾರೆ.
ಕರ್ನಾಟಕ ಬಂದ್‌ಗೆ ಸಿಪಿಎಂ ಕೂಡ ಬೆಂಬಲ ನೀಡಿದ್ದು, ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿಗಿನ ಬಂದ್ ಬಿಸಿ ತಟ್ಟಲಿದೆ. ದೈನಂದಿನ ವ್ಯವಹಾರಗಳು, ಬಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ಒಂದು ದಿನ ಅಂಗಡಿ ಮುಚ್ಚಿದ್ರೂ ಪರವಾಗಿಲ್ಲ:
ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಿದ್ದರಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ. ಆದರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಲಿದೆ. ಒಂದು ದಿನದ ವ್ಯಾಪಾರಕ್ಕೆ ಕುತ್ತು ತರಲಿದೆ. ಆದರೆ ಈಗ ಸುಮ್ಮನಿದ್ದರೆ ವಿದ್ಯುತ್ ಬಿಲ್ ಕಟ್ಟಲಾಗದೇ ಹೈರಾಣಾಗುವ ಸಾಧ್ಯತೆ ಇದೆ, ಒಂದು ದಿನದ ಲಾಸ್ ತಡೆದುಕೊಳ್ಳಬಹುದು, ಆದರೆ ಐದು ವರ್ಷ ಅಧಿಕ ವಿದ್ಯುತ್ ಬಿಲ್ ಕಟ್ಟಲಾಗದು ಎಂದು ಪ್ರತಿಭಟನಾನಿರತ ವ್ಯಾಪಾರಿಗಳು ಹೇಳಿದ್ದಾರೆ.

ಸಮಸ್ಯೆ ಆರಂಭ ಹೇಗೆ?
ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಗ್ಯಾರೆಂಟಿ ನೀಡಿದ್ದು, ಮಾತಿನಂತೆ ಗ್ಯಾರೆಂಟಿ ನೀಡಿದೆ. ಆದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತನ್ನ ಸುಂಕದ ಆದೇಶದಲ್ಲಿ ಪ್ರತಿ ಯುನಿಟ್‌ಗೆ 70 ಪೈಸೆ ಹೆಚ್ಚಳ ಮಾಡಿದೆ. ಕಾಂಗ್ರೆಸ್ ಈ ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಂಡಿದೆ ಎನ್ನುವುದು ಜನಸಾಮಾನ್ಯರ ಆರೋಪವಾಗಿದೆ. ಮನೆಯಲ್ಲಿದ್ದವರಿಗೆ ಫ್ರೀ ಕರೆಂಟ್ ಆದರೆ ಸಣ್ಣ ಪುಟ್ಟ ಅಂಗಡಿ ನಡೆಸುವವರಿಗೆ ವಿದ್ಯುತ್ ದರ ಬೆಲೆ ಏರಿಕೆ ಗಾಯದ ಮೇಲೆ ಬರೆಯಂತಾಗಿದೆ. ಇದಕ್ಕಾಗಿ ಇಂದು ಬಂದ್‌ಗೆ ಕರೆ ನೀಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!