ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಪ್ರಭುತ್ವವನ್ನು ಮರುಸ್ಥಾಪಿಸಿ ಹಾಗೂ ಈ ಹಿಂದೆ ದೇಶಕ್ಕಿದ್ದ ‘ಹಿಂದು ರಾಷ್ಟ್ರ’ ವೆಂಬ ಸ್ಥಾನಮಾನವನ್ನು ಪುನಃ ನೀಡಿ ಎಂದು ಆಗ್ರಹಿಸಿ ಸಹಸ್ರಾರು ನಾಗರಿಕರು ನೇಪಾಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.
ನೇಪಾಳದ ಮಾಜಿ ದೊರೆ ಜ್ಞಾನೇಂದ್ರನ ಪರ ಘೋಷಣೆಗಳನ್ನು ಕೂಗುತ್ತ ಕಾಠ್ಮಂಡು ನಗರವನ್ನು ಆವರಿಸುತ್ತಿರುವ ಪ್ರತಿಭಟನಾಕಾರರರನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಈಗಿನ ಪ್ರಜಾಪ್ರಭುತ್ವ ಮಾದರಿ ಆಡಳಿತದ ವಿರುದ್ಧ ನಡೆದಿರುವ ಪ್ರತಿಭಟನೆಯಲ್ಲಿ ,ʻನಾವು ನಮ್ಮ ರಾಜ ಮತ್ತು ದೇಶವನ್ನು ನಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ. ರಾಜಪ್ರಭುತ್ವವನ್ನು ಮರಳಿ ತನ್ನಿ. ಗಣರಾಜ್ಯವನ್ನು ರದ್ದುಪಡಿಸಿʼ ಎಂಬ ಘೋಷಣೆಗಳು ಮಾರ್ದನಿಸಿವೆ.
2006ರಲ್ಲಿ ನಡೆದ ಪ್ರತಿಭಟನೆಗಳ ಕಾರಣಕ್ಕಾಗಿಯೇ ಅಂದಿನ ರಾಜ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. 2008ರಲ್ಲಿ ನೇಪಾಳವು ಪ್ರಜಾಪ್ರಭುತ್ವದ ಗಣರಾಜ್ಯ ವ್ಯವಸ್ಥೆಯನ್ನು ಪಡೆಯಿತು. ಈ ಬೆಳವಣಿಗೆಗಳಿಗೆ ಕಮ್ಯುನಿಸ್ಟರ ಕುಮ್ಮಕ್ಕಿತ್ತೆಂಬ ಆರೋಪಗಳು ಆಗ ದಟ್ಟವಾಗಿ ಕೇಳಿಬಂದಿದ್ದವು. ತದನಂತರ ಹಲವು ಪಕ್ಷಗಳು ನೇಪಾಳದ ಆಡಳಿತ ಚುಕ್ಕಾಣಿಯನ್ನು ನಿರ್ವಹಿಸಿದ ನಂತರ, ಈಗ ಅಲ್ಲಿನ ಬಹುದೊಡ್ಡ ಜನವರ್ಗವು ರಾಜಸತ್ತೆಯೇ ಉತ್ತಮವಾಗಿತ್ತು ಎಂಬ ಭಾವನೆಗೆ ಮರಳಿದೆ. ಈಗಿನ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ ಆಡಳಿತವನ್ನು ಸಂಪೂರ್ಣ ಕಡೆಗಣಿಸಿವೆ ಎಂಬುದು ಗಣರಾಜ್ಯ ವ್ಯವಸ್ಥೆ ವಿರುದ್ಧ ಪ್ರತಿಭಟಿಸುತ್ತಿರುವವರ ಪ್ರತಿಪಾದನೆ.
2007ರಲ್ಲಿ ನೇಪಾಳದಲ್ಲಿ ಅಂಗೀಕರಿಸಲಾಗಿದ್ದ ಮಧ್ಯಾಂತರ ಸಂವಿಧಾನವು ನೇಪಾಳವನ್ನು ಸೆಕ್ಯುಲರ್ ಎಂದು ವ್ಯಾಖ್ಯಾನಿಸಿತ್ತು. ಇದೀಗ ರಾಜಸತ್ತೆಗಾಗಿ ಬೀದಿಗಿಳಿದಿರುವವರು ನೇಪಾಳವನ್ನು ಮತ್ತೆ ಹಿಂದುರಾಷ್ಟ್ರ ಎಂದು ಘೋಷಿಸಬೇಕೆಂದೂ ಪಟ್ಟು ಹಿಡಿದಿದ್ದಾರೆ.