ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮಾಯಕ ಪ್ರವಾಸಿಗರ ಪ್ರಾಣ ಉಳಿಸಲು ಗುಂಡಿಗೆ ನನ್ನ ಮಗ ಎದೆಯೊಡ್ಡಿದ್ದಾನೆ. ಅವನ ಬಗ್ಗೆ ಹೆಮ್ಮೆ ಇದೆ. ಆದರೆ ಮಗನನ್ನು ಕಳೆದುಕೊಂಡ ದುಃಖ ಉಮ್ಮಳಿಸುತ್ತಿದೆ ಎಂದು ಕುದುರೆ ಸವಾರ ಆದಿಲ್ ತಂದೆ ಹೈದರ್ ಷಾ ಕಣ್ಣೀರಿಟ್ಟಿದ್ದಾರೆ.
ಪಹಲ್ಗಾಮ್ ಆರೋಗ್ಯ ರೆಸಾರ್ಟ್ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯ ಸಮಯದಲ್ಲಿ ಭಯೋತ್ಪಾದಕರಲ್ಲಿ ಒಬ್ಬರಿಂದ ಬಂದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಕುದುರೆ ಸವಾರ ಆದಿಲ್ ಗೆ ಮೂರು ಗುಂಡುಗಳು ತಗುಲಿ ಮೃತಪಟ್ಟಿದ್ದರು.
ನಾನು ಇಂದು ಜೀವಂತವಾಗಿದ್ದರೆ, ಪ್ರವಾಸಿಗರನ್ನು ರಕ್ಷಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಕ್ಕಾಗಿ ನನ್ನ ಮಗನ ಬಗ್ಗೆ ನನಗೆ ಇರುವ ಹೆಮ್ಮೆಯೇ ಕಾರಣ. ಅವನಿಗೆ ಇನ್ನೂ ಸಣ್ಣ ವಯಸ್ಸು, ನೋಡೋದಕ್ಕೂ ಸ್ಫುರದ್ರೂಪಿಯಾಗಿದ್ದ. ನನ್ನ ಚಿತೆಗೆ ಅವನು ಬೆಂಕಿ ಇಡುತ್ತಾನೆ ಎಂದು ಅಂದುಕೊಂಡಿದ್ದೆ. ಆದರೆ ವಿಧಿಯಾಟ ಬೇರೆಯೇ ಇದೆ. ಮಗ ಮಾಡಿದ ಕೆಲಸದಿಂದ ಆತನ ಧೈರ್ಯದಿಂದ ಬದುಕುತ್ತೇನೆ ಎಂದು ಹೇಳಿದ್ದಾರೆ. ಆದಿಲ್ ಅವರ ಪೋಷಕರು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಒಳಗೊಂಡ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದರು.