ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಚೋದನಕಾರಿ ಪೋಸ್ಟುಗಳನ್ನು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಅನ್ಯಕೋಮಿನ ಮೂವರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಓಪಿಶಿಯಲ್ ಜಾಫರ್78 ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ಹುಲಿದೇವರವಾಡದ ಯುವಕ ಪ್ರಚೋದನಾತ್ಮಕ ಸ್ಟೇಟಸ್ ಹಾಕಿ ಬಾಬ್ರಿ ಮಸೀದಿ ಪೋಟೋದ ಮೇಲೆ ಉರ್ದು ಅಕ್ಷರದ ಶಬ್ದಗಳ ಜೊತೆಗೆ ಇಂಗ್ಲಿಷ್ ಅಕ್ಷರ ಬಳಸಿ ಸಮಾಧಾನದಿಂದ ಇರಿ ಸಮಯ ಬರುತ್ತದೆ ಆಗ ದೇಹದಿಂದ ತಲೆ ಬೇರೆ ಮಾಡುತ್ತೇವೆ ಎಂದು ಅರ್ಥ ಬರುವ ಹೇಳಿಕೆ ಬರೆದುಕೊಂಡಿದ್ದು ಪೋಟೋದಲ್ಲಿ ಬರೆದ ಪದಗಳು ಹಿಂದೂ ಮುಸ್ಲಿಂ ಧರ್ಮದ ನಡುವೆ ದ್ವೇಷವನ್ನು ಹುಟ್ಟಿಸುವ, ಹಿಂದೂ ಸಮುದಾಯದ ಜನರನ್ನು ಪ್ರಚೋದಿಸುವ, ಭಾವನೆಗಳಿಗೆ ದಕ್ಕೆ ತರುವ, ಸಾರ್ವಜನಿಕ ಶಾಂತಿ ಕದಡುವ, ವೈರತ್ವ, ದ್ವೇಷ ವೈಮನಸ್ಸು ಹುಟ್ಟಿಸುವ ಉದ್ದೇಶ ಒಳಗೊಂಡಿರುವುದರಿಂದ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ ವ್ಯಕ್ತಿಯ ಮೇಲೆ ಕಲಂ 153(ಎ) 295(ಎ) 505(2) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಇದೇ ರೀತಿಯ ಇನ್ಸ್ಟಾಗ್ರಾಮ್ ಪೋಸ್ಟ್ ಪ್ರಕಟಿಸಿದ ಅಂಕೋಲಾ ತಾಲೂಕಿನ ಮತ್ತಿಬ್ಬರು ವ್ಯಕ್ತಿಗಳ ಮೇಲೆ ಸಹ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರು ದೂರು ನೀಡಿದ್ದು ಪೊಲೀಸ್ ಉಪ ನಿರೀಕ್ಷಕರುಗಳಾದ ಉದ್ದಪ್ಪ ಧರೆಪ್ಪನವರ್ ಮತ್ತು ಸುಹಾಸ ಪ್ರಕರಣ ದಾಖಲಿಸಿದ್ದಾರೆ.
ಅನ್ಯಕೋಮಿನ ಯುವಕನ ಸಾಮಾಜಿಕ ಜಾಲತಾಣದ ಪೋಸ್ಟಿನ ಕುರಿತಂತೆ ಬುಧವಾರ ಸಂಜೆ ಹಿಂದೂ ಸಮುದಾಯದ ಜನರು ಭಾರೀ ಪ್ರಮಾಣದಲ್ಲಿ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಕೂಡಲೇ ಕಾರ್ಯಪೃವೃತ್ತರಾದ ಅಂಕೋಲಾ ಪೊಲೀಸರು ಪ್ರಚೋದನಕಾರಿ ಪೋಸ್ಟ್ ಪ್ರಕಟಿಸಿದ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರ ಮೇಲೆ ಪ್ರಕರಣ ದಾಖಲಾದಂತಾಗಿದೆ