ಹೊಸದಿಗಂತ ವರದಿ, ಚಿತ್ರದುರ್ಗ:
ಯಾವುದೇ ಪರೀಕ್ಷೆಗಳಲ್ಲಿ ಅಕ್ರಮ ನಡೆದಾಗ ಮರು ಪರೀಕ್ಷೆ ನಡೆಸುವುದು ಸಾಮಾನ್ಯ. ಹೀಗಾಗಿ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಗೆ ಮತ್ತೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕಾರಣ ಆ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಇದರಿಂದ ಯಾರಿಗೂ ಅನ್ಯಾಯವಾಗುವ ಪ್ರಶ್ನೆಯೇ ಇಲ್ಲ ಎಂದರು.
ಎಡಿಜಿಪಿ ವರ್ಗಾವಣೆ ವಿಚಾರ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಅಧಿಕಾರಿ ಕಳಂಕಿತ ಅಲ್ಲ. ಅದರಂತೆ ಅವರು ಕಳಂಕಿತ ಎಡಿಜಿಪಿ ಅಲ್ಲ. ಅವರನ್ನು ಸಾಮಾನ್ಯವಾಗಿ ಆಡಳಿತಾತ್ಮಕ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಭಾಷಾ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಟ ಸುದೀಪ್ ಹಾಗೂ ಅಜಯ್ ದೇವಗನ್ ಸ್ವೀಟ್ಗೆ ಸಂಬಂಧಿಸಿದಂತೆ ಮೊದಲು ಪ್ರತಿಕ್ರಿಯಿಸಿದ್ದೇ ಕಾಂಗ್ರೆಸ್ನವರು. ಕನ್ನಡ ನಾಡು – ನುಡಿ, ನೆಲ – ಜಲದ ವಿಚಾರ ಬಂದಾಗ ಅಭಿಮಾನ ತೋರಬೇಕು. ಅದರಂತೆ ನಾವು ಕನ್ನಡದ ಪರ ಧ್ವನಿ ಎತ್ತಿದ್ದೇವೆ. ಭಾಷೆಯ ಅಭಿಮಾನದಿಂದ ಮಾತನಾಡಿದರೂ ಕಾಂಗ್ರೆಸ್ನವರು ಸಹಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.