ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಶಾಸಕ ಪ್ರಿಯಾಂಕ ಖರ್ಗೆಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ಜಾರಿಗೊಳಿಸಿದೆ.
ಈಗಾಗಲೇ ಎರಡು ಬಾರಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಶಾಸಕ ಪ್ರಿಯಾಂಕ ಖರ್ಗೆಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿತ್ತು.ಲಿಖಿತ ಉತ್ತರ ಕೂಡ ನೀಡಿದ್ದರು.
ಆದರೆ ಪ್ರಕರಣದಲ್ಲಿ ನೀವು ಸಲ್ಲಿಸಿರುವ ಉತ್ತರದಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳಿವೆ. ಹೀಗಾಗಿ ಮತ್ತೆ ತಮ್ಮ ಬಳಿ ಪ್ರಕರಣ ಸಂಬಂಧ ಇರುವಂತ ದಾಖಲಾತಿ, ಮಾಹಿತಿ ಸಲ್ಲಿಸುವಂತೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ.
ಈ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆಗೆ ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿಯ ಸಹಾಯಕ ತನಿಖಾಧಿಕಾರಿ ಹಾಗೂ ಪೊಲೀಸ್ ಉಪಾಧಿಕ್ಷಕರಾದಂತ ನರಸಿಂಹಮೂರ್ತಿ ಪಿ ಅವರು ನೋಟಿಸ್ ಜಾರಿ ಮಾಡಿದ್ದು,’ ದಿನಾಂಕ 28-04-2022ರಂದು ಒಂದು ಉತ್ತರವನ್ನು ನೀವು ಸಲ್ಲಿಸಿದ್ದು, ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡು ಬಂದಿರುತ್ತವೆ ಎಂದಿದ್ದಾರೆ.
ಸಾರ್ವಜನಿಕ ಜಾಲತಾಣಗಳಲ್ಲಿ ಎಷ್ಟೋ ಅನಗತ್ಯ ಹಾಗೂ ನೈಜತೆಯಿಲ್ಲದ ಮಾಹಿತಿಗಳು ಹರಿದಾಡುತ್ತಿದ್ದು, ಅವುಗಳನ್ನು ತನಿಖೆಯಲ್ಲಿ ಸಾಕ್ಷ್ಯವನ್ನಾಗಿಸಿ, ಅಳವಡಿಸಿಕೊಳ್ಳಲು ಬರುವುದಿಲ್ಲ. ಆದ್ರೇ.. ತಾವು ಕಲಬುರ್ಗಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಡಿಯೋ ಕ್ಲಿಪಿಂಗ್ ಹಾಜರು ಪಡಿಸಿ, ತಮ್ಮ ಬಳಿ ಇನ್ನೂ ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿದ್ದನ್ನು ಗಮನಿಸಲಾಗಿದೆ. ತಾವು ಅವುಗಳನ್ನು ಹಾಜರು ಪಡಿಸುವ ಮೊದಲು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತ್ರ ಮಾಧ್ಯಮದವರ ಮುಂದೆ ಹಾಜರುಪಡಿಸಿರುತ್ತೀರಿ ಎಂದು ಭಾವಿಸಿ, ಸದರಿ ನೋಟೀಸ್ ಅನ್ನು ನೀಡಲಾಗಿತ್ತು ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಶಾಸಕರಾದ ತಾವು, ಈ ನೋಟಿಸ್ ಮುಟ್ಟಿದ ಎರಡು ದಿನಗಳೊಳಗಾಗಿ ಕೆಳಗೆ ಸಹಿ ಮಾಡಿದ ಸಹಾಯಕ ತನಿಖಾಧಿಕಾರಿಯವರ ಮುಂದೆ, ಹಾಜರಾಗಿ, ಪ್ರಕರಣದ ತನಿಖೆಗೆ ಸಹಾಯವಾಗಬಹುದಾದ ತಮ್ಮ ಬಳಿಯಿರುವಂತ ದಾಖಲಾತಿ ಹಾಗೂ ಮಾಹಿತಿಯನ್ನು ಹಾಜರುಪಡಿಸಲು ಸೂಚಿಸಿದ್ದಾರೆ.