ಹೊಸದಿಗಂತ ವರದಿ , ಕಲಬುರಗಿ:
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಬ್ಬರು ಆರ್. ಡಿ .ಪಾಟೀಲ್ ಆಪ್ತರಾಗಿದ್ದಾರೆ.
ಅಫಜಲಪುರ ತಾಲೂಕಿನ ಮನೂರ್ ಗ್ರಾಮದ ನಿವಾಸಿ ಅಸ್ಲಂ ಹಾಗೂ ಕರಜಗಿ ಗ್ರಾಮದ ನಿವಾಸಿ ಮುನಾಫ್ ಜಮಾದಾರ ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರು ಆರೋಪಿಗಳು ಆರ್ ಡಿ ಪಾಟೀಲ್.ಗೆ ಅಭ್ಯರ್ಥಿಗಳನ್ನು ಪೂರೈಸುವುದಲ್ಲದೆ ಬ್ಲೂಟೂತ್ಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿ ಅಸ್ಲಂ ಪಿಎಸ್ಐ ಅಕ್ರಮ ವಿರುದ್ಧದ ಹೋರಾಟಗಾರ ಧಾರವಾಡದ ಆರ್ ಎಸ್ ಪಾಟೀಲ್ ಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಸದ್ಯ ಇಬ್ಬರನ್ನು ಬಂಧಿಸಿದ ಅಧಿಕಾರಿಗಳು ಆರೋಪಿಗಳನ್ನು ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಈ ಮೂಲಕ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾದ ಇನ್ನಷ್ಟು ಅಭ್ಯರ್ಥಿಗಳು ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.