ಹೊಸದಿಗಂತ ವರದಿ ಕಲಬುರಗಿ:
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಫಿಂಗರ್ ಪ್ರಿಂಟ್ ವಿಭಾಗದ ಸಿಪಿಐ ಆಗಿರುವ ಆನಂದ ಮೇತ್ರಿ ಅವರನ್ನು ಸಿಐಡಿ ಕಚೇರಿಗೆ ಕರೆತಂದು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ಧಾರೆ.
ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ಸಿಐಡಿ ಕಚೇರಿಗೆ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ಕರೆಸಲಾಗಿದೆ. ನಿನ್ನೆ ಐದು ಗಂಟೆ ಕಾಲ ವಿಚಾರಣೆಗೊಳಗಾಗಿದ್ದರೂ ಇಂದು ಮತ್ತೆ ವಿಚಾರಣೆಗೆ ಸಿಐಡಿ ಅಧಿಕಾರಿಗಳು ಬರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಸಾಲಿ ಮತ್ತೆ ಆಗಮಿಸಿದ್ದು ವಿಚಾರಣೆ ನಡೆದಿದೆ.
ಮಧ್ಯಾಹ್ನ 3.30ರವರೆಗೂ ತೀವ್ರ ವಿಚಾರಣೆಯ ನಂತರ ಇಬ್ಬರೂ ಆರೋಪಿತ ಪೋಲೀಸ್ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಇಬ್ಬರೂ ಅಧಿಕಾರಿಗಳನ್ನು ಬುಧವಾರ ನಿರಂತರ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಗುರುವಾರ ಬೆಳಿಗ್ಗೆ ಮತ್ತೆ ಕರೆಸಿದ್ದರು. ಸಂಜೆಗೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.
ಬ್ಲೂಟೂತ್ ಬಳಸಿ ವಾಮಮಾರ್ಗದ ಮೂಲಕ ಅಭ್ಯರ್ಥಿಗಳನ್ನು ಪಾಸ್ ಮಾಡಿಸಲು, ಆರೋಪಿ ರುದ್ರಗೌಡ ಪಾಟೀಲ ಬಳಿ ಡೀಲ್ ಮಾಡಿದ ಆರೋಪ ಇವರ ಮೇಲಿದೆ.