ಹೊಸದಿಗಂತ ವರದಿ ಪುತ್ತೂರು:
ರಸ್ತೆ ಸಮಸ್ಯೆಗೆ ಸಂಬಂಧಪಟ್ಟಂತೆ ಕೈಗೊಂಡ ಕ್ರಮದ ಮಾಹಿತಿ ನೀಡದ ಪುತ್ತೂರು ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ, ತಹಶೀಲ್ದಾರಿಗೆ ರಾಜ್ಯ ಮಾಹಿತಿ ಆಯೋಗ ರೂ.15 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪುತ್ತೂರು ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸುಲೋಚನಾ ಅವರಿಗೆ ದಂಡ ವಿಧಿಸಿದ್ದು, ಸೂಕ್ತ ಕ್ರಮ ವಹಿಸಲು ಆಯೋಗದ ಕಾರ್ಯದರ್ಶಿಗಳಿಗೆ ಸೂಚಿಸಿದೆ. ಅಲ್ಲದೆ, ಮೇಲ್ಮನವಿದಾರರ ಪ್ರಕರಣದ ಕುರಿತು ನಿಯಮಾನುಸಾರ ಕ್ರಮ ಕೈಗೊಂಡು ಇತ್ಯರ್ಥಪಡಿಸಲು ಪುತ್ತೂರು ಸಹಾಯಕ
ಆಯುಕ್ತ ಗಿರೀಶ್ ನಂದನ್ ಅವರಿಗೆ ಸೂಚಿಸಿದೆ.
ನೆಟ್ಟಣಿಗೆ ಮುನ್ನೂರು ಗ್ರಾಮದ ಸರೋಳಿಮೂಲೆ ನಿವಾಸಿ ಶ್ರೀಧರ್ ಪೂಜಾರಿ ಮೇಲ್ಮನವಿ ಸಲ್ಲಿಸಿದ್ದರು. ಅವರು ಕಳೆದ 25 ವರ್ಷಗಳಿಂದ ಬಳಸುತ್ತಿದ್ದ ಸರ್ಕಾರಿ ಜಾಗವನ್ನು ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿದ್ದರು ಎಂದು ಪುತ್ತೂರು ತಹಶೀಲ್ದಾರರಿಗೆ ದೂರು ನೀಡಿದ್ದರು. ದೂರು ನೀಡಿ ಒಂದೂವರೆ ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿರದ ಕಾರಣ, ಡಾ. ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿಯಾಗಿದ್ದಾಗ ನಡೆಸಿದ ಗ್ರಾಮ ವಾಸ್ತವ್ಯದಲ್ಲೂ ಮನವಿ ನೀಡಿದ್ದರು.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಪುತ್ತೂರು ತಹಶೀಲ್ದಾರರಿಗೆ ಸೂಚಿಸಿದ್ದರು. ಈ ಕುರಿತು ಕೈಗೊಂಡ ಕ್ರಮದ ಮಾಹಿತಿಯನ್ನು ನೀಡುವಂತೆ ಶ್ರೀಧರ್ ಪೂಜಾರಿ ಮನವಿ ಮಾಡಿಕೊಂಡಿದ್ದರು. ನೀಡಿದ್ದ ಮನವಿಗೆ ಸ್ಪಂದನೆ ದೊರಕದೇ ಇದ್ದ ಹಿನ್ನಲೆಯಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯೋಗ ಇದೀಗ ತೀರ್ಪು ನೀಡಿದೆ. ಆದೇಶದಲ್ಲಿ – ಮೇಲ್ಮನವಿದಾರರಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದೇ ಇರುವುದು, ಮಾತ್ರವಲ್ಲ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ ಬಳಿಕವೂ 2013ರ ಜುಲೈ 24ರ ಮೊದಲು ಅಂದರೆ ಒಂದು ತಿಂಗಳ ಅವಧಿಯಲ್ಲೂ ಮೇಲ್ಮನವಿದಾರರಿಗೆ ಮಾಹಿತಿ ನೀಡಲಾಗಿಲ್ಲ. ಕಡತವು ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ತನಿಖಾ ಹಂತದಲ್ಲಿರುವುದರಿಂದ ವಿಳಂಬ ಎಂದು ತಿಳಿಸಿರುವುದನ್ನು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಮೇಲ್ಮನವಿದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿ ಒದಗಿಸದೇ ಇರುವುದರಿಂದ 2023ರ ಏಪ್ರಿಲ್ 24 ಮತ್ತು 2023ರ ಮೇ 24ರ ಆದೇಶದಲ್ಲಿ ಕಾಯ್ದೆಯ ಕಲಂ 20(1)ರ ಅಡಿ ದಂಡ ವಿಧಿಸುವುದಾಗಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಹ ಯಾವುದೇ ಲಿಖಿತ ಸಮಜಾಯಿಷಿಯನ್ನು ಆಯೋಗಕ್ಕೆ ಸಲ್ಲಿಸದೇ ಇರುವುದನ್ನು ಹಾಗೂ ಆಯೋಗದ ವಿಚಾರಣೆಗೆ ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.