ಹೊಸದಿಗಂತ ಭಟ್ಕಳ:
ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ಭಟ್ಕಳ ಮೂಲದ ಯುವಕನಿಗೆ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರದ ಮುಂಬೈ ಎ.ಟಿ.ಎಸ್ ತಂಡದ ಅಧಿಕಾರಿಗಳು ಆತನ ಮನೆ ಮತ್ತು ಕಚೇರಿಗಳಲ್ಲಿ ನೋಟೀಸ್ ಅಂಟಿಸಿ ಹೋಗಿದ್ದಾರೆ.
ಮೂಲತಃ ಭಟ್ಕಳ ನವಾಯತ್ ಕಾಲೋನಿ ಹಾಜಿ ಮಂಜಿಲ್ ನಿವಾಸಿಯಾಗಿರುವ ಅಬ್ದುಲ್ ಕಾದಿರ್ ಸುಲ್ತಾನ ಅಲಿಯಾಸ್ ಮೌಲಾನಾ ಸುಲ್ತಾನ ಎನ್ನುವ ಶಂಕಿನ ಮೇಲೆ ಮಹಾರಾಷ್ಟ್ರದ ಪುಣೆಯಲ್ಲಿ ಕಾನೂನು ಬಾಹೀರ ಕೃತ್ಯ ಎಸಗಿದ್ದಕ್ಕಾಗಿ ಕಲಂ 10 ಮತ್ತು 13ರನ್ವಯ ಪ್ರಕರಣ ದಾಖಲಾಗಿದ್ದು ಪುಣೆಯ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಜೂ.21ಕ್ಕೆ ವಿಚಾರಣೆಗೆ ಇಡಲಾಗಿದ್ದು ಹಾಜರಾಗುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ.
ಭಟ್ಕದಲ್ಲಿ ಆತನಿಗಾಗಿ ಶೋಧ ನಡೆಸಿದ ತಂಡ ಅಂತಿಮವಾಗಿ ಆತನ ಮನೆಗೆ ನೋಟೀಸು ಅಂಟಿಸಿ ಹೋಗಿದ್ದಾಗಿ ತಿಳಿದು ಬಂದಿದ್ದು ಜೂನ್ 6ನೇ ತಾರೀಕನ್ನು ನಮೂದಿಸಿರುವ ನೋಟೀಸನ್ನು ಅಂಟಿಸಿದ್ದಾರೆ. ಭಟ್ಕಳಕ್ಕೆ ಮಹಾರಾಷ್ಟ್ರ ಎ.ಟಿ.ಎಸ್ ತಂಡ ಆತನ ಮನೆಯನ್ನು ಹುಡುಕಿಕೊಂಡು ಹೋಗಿದ್ದು ಆತ ಮನೆಯಲ್ಲಿ ಇಲ್ಲದ ಕಾರಣ ಮನೆಗೆ ನೋಟೀಸು ಅಂಟಿಸಿ ಸಾರ್ವಜನಿಕವಾಗಿ ಜಾಹೀರ ಮಾಡಿ ತೆರಳಿದ್ದಾರೆನ್ನಲಾಗಿದೆ. 2008ರಲ್ಲಿ ಪುಣೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ಕಾದಿರ್ ಸುಲ್ತಾನ ಅಲಿಯಾಸ್ ಮೌಲಾನಾ ಸುಲ್ತಾನ ಕಳೆದ ಕೆಲ ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ.