ಪಂಜಾಬ್​ ಉಪ ಚುನಾವಣೆ । ಮುಖ್ಯಮಂತ್ರಿಯ ಭದ್ರಕೋಟೆ ಭೇದಿಸಿದ ಶಿರೋಮಣಿ: ಆಪ್​ಗೆ ಭಾರಿ ಮುಖಭಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೂರು ಲೋಕಸಭೆ ಹಾಗೂ ಏಳು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಪಂಜಾಬ್​ನ ಆಡಳಿತಾರೂಢ ಆಪ್​ಗೆ ಭಾರಿ ಮುಖಭಂಗವಾಗಿದೆ.
ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಭದ್ರಕೋಟೆಯಾಗಿದ್ದ ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಹೀನಾಯ ಸೋಲು ಕಂಡಿದ್ದು, ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಗೆದ್ದು ಬೀಗಿದ್ದಾರೆ. ಸುಮಾರು 7 ಸಾವಿರ ಮತಗಳ ಅಂತರದಿಂದ ಆಪ್​ನ ಗುರ್ಮೈಲ್ ಸಿಂಗ್​ ಅವರನ್ನು ಸೋಲಿಸಿದ್ದಾರೆ.
77 ವರ್ಷದ ಸಿಮ್ರಂಜಿತ್ ಸಿಂಗ್ ಮಾನ್ ಅವರು ಮಾಜಿ ಸಂಸದ ಮತ್ತು ಶಿರೋಮಣಿ ಅಕಾಲಿದಳದ (ಅಮೃತಸರ) ಅಧ್ಯಕ್ಷ. ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಮತ್ತು ಅಕಾಲಿದಳದ ಕಮಲದೀಪ್ ಕೌರ್ ರಾಜೋನಾ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
2022 ರ ವಿಧಾನಸಭಾ ಚುನಾವಣೆಯಲ್ಲಿ ಲೆಹ್ರಾ, ದಿರ್ಬಾ, ಬರ್ನಾಲಾ, ಸುನಮ್, ಭದೌರ್, ಮೆಹಲ್ ಕಲಾನ್, ಮಲೇರ್‌ಕೋಟ್ಲಾ, ಧುರಿ ಮತ್ತು ಸಂಗ್ರೂರ್ ಎಲ್ಲಾ ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಂಗ್ರೂರ್ ಸಂಸದೀಯ ಕ್ಷೇತ್ರವನ್ನು ಭದ್ರಕೋಟೆ ಎಂದು ಪರಿಗಣಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಭಗವಂತ್ ಮಾನ್ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!