ಹೊಸದಿಗಂತ ವರದಿ,ಮಡಿಕೇರಿ:
ಪಿಗ್ಮಿಯ ಮೂಲಕ ಕಟ್ಟಿಸಿಕೊಂಡ ಹಣವನ್ನು ಹಿಂತಿರುಗಿಸದೆ ಕಚೇರಿಯನ್ನು ಮುಚ್ಚಿರುವ ಕೇರಳ ಮೂಲದ ‘ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ’ ಸಂಸ್ಥೆಯ ವಿರುದ್ಧ ಕೊಡಗಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಬೈಲುಕುಪ್ಪೆ ನಿವಾಸಿ ಕೆ.ಟಿ.ಚಂದ್ರಹಾಸ ಎಂಬವರು ಸಂಸ್ಥೆಯ ಮುಖ್ಯಸ್ಥ ರಾಹುಲ್ ಚಕ್ರಪಾಣಿ ಹಾಗೂ ಸಿಇಓ ಸನ್ನಿ ಅಬ್ರಹಾಂ ಮತ್ತು ಇತರರ ವಿರುದ್ಧ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ದಂಡಿನಪೇಟೆಯಲ್ಲಿದ್ದ ‘ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್’ನ ಶಾಖೆಯಲ್ಲಿ ಬೈಲುಕುಪ್ಪೆ ನಿವಾಸಿ ಕೆ.ಟಿ.ಚಂದ್ರಹಾಸ ಎಂಬವರು 2023ರ ಜೂನ್’ನಿಂದ ಪ್ರಸಕ್ತ ಸಾಲಿನ ಫೆಬ್ರವರಿವರೆಗೆ 99,500 ರೂ.ಗಳನ್ನು ಪಿಗ್ಮಿ ಮೂಲಕ ಕಟ್ಟಿದ್ದರೆನ್ನಲಾಗಿದೆ.
ಆದರೆ ಈ ಹಣವನ್ನು ಹಿಂತಿರುಹಿಸದೆ ಮಾರ್ಚ್ ತಿಂಗಳಿನಿಂದ ಶಾಖಾ ಕಚೇರಿಯನ್ನು ಮುಚ್ಚುವ ಮೂಲಕ ಸಂಸ್ಥೆಯ ಮುಖ್ಯಸ್ಥ ರಾಹುಲ್ ಚಕ್ರಪಾಣಿ ಹಾಗೂ ಸಿಇಓ ಆದ ಸನ್ನಿ ಅಬ್ರಹಾಂ ಮತ್ತು ಇತರರು ಸೇರಿ ವಂಚನೆ ಮಾಡಿದ್ದಾರೆ ಎಂದು ಚಂದ್ರಹಾಸ ಅವರು ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರ ಅನ್ವಯ ಕಲಂ: 406 420 ರೆ/ವಿ 34 ಐ.ಪಿ.ಸಿ ಮತ್ತು ಕಲಂ: 21, 22, 23 Banning of Unregulated Deposit Scheems Act- 2019 (BUDS Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದೀಗ ಆರೋಪಿಗಳು ಕೊಡಗು ಜಿಲ್ಲೆಯ ಗೋಣಿಕೊಪ್ಪ, ವೀರಾಜಪೇಟೆ ಮತ್ತು ಕುಶಾಲನಗರದಲ್ಲಿ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಕಚೇರಿ ತೆರೆದು ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ಮಿ ಕಲೆಕ್ಷನ್, ಆರ್.ಡಿ. ಹಾಗೂ ಬಾಂಡ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹಣ ಹಿಂತಿರುಗಿಸದೆ ಕಚೇರಿಯನ್ನು ಮುಚ್ಚಿ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವುದಾಗಿ ಹೇಳಲಾಗಿದ್ದು, ಈ ಸಂಬಂಧ ಗೋಣಿಕೊಪ್ಪ, ವೀರಾಜಪೇಟೆ ನಗರ ಹಾಗೂ ಕುಶಾಲನಗರ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾರ್ವಜನಿಕರು ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ನಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಲ್ಲಿ ದಾಖಲಾತಿಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಕೊಡಗು ಜಿಲ್ಲಾ ಪೊಲೀಸರು ಕೋರಿದ್ದಾರೆ.