ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿ ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ವಿಧಿಸಿದ್ದ ಮರಣದಂಡನೆಯನ್ನು ಮರುಪರಿಶೀಲಿಸುವಂತೆ, ಭಾರತ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯವು ಅಂಗೀಕರಿಸಿದೆ.
ಕತಾರ್ ನ್ಯಾಯಾಲಯವು ಮೇಲ್ಮನವಿಯನ್ನು ಪರಿಗಣಿಸಿದ್ದು, ವಿಚಾರಣೆಯ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಮೇಲ್ಮನವಿ ಸ್ವೀಕರಿಸಿರುವುದು ತಮ್ಮವರನ್ನು ಉಳಿಸಿಕೊಳ್ಳುವಲ್ಲಿ ಭಾರತದ ಬದ್ದತೆಯನ್ನು ಒತ್ತಿಹೇಳುತ್ತದೆ.
ಏನಿದು ಘಟನೆ?
2022ರ ಆಗಸ್ಟ್ನಲ್ಲಿ ಭಾರತದ ನೌಕಾ ಸಿಬ್ಬಂದಿಯನ್ನು ಬೇಹುಗಾರಿಕೆ ಪ್ರಕರಣದಲ್ಲಿ ಕತಾರ್ ಗುಪ್ತಚರ ಸಂಸ್ಥೆ ಬಂಧಿಸಿತ್ತು. ಕತಾರ್ನ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ತಿರಸ್ಕರಿಸಿ ತೀರ್ಪು ನೀಡಿತ್ತು.
ಅಕ್ಟೋಬರ್ 26 ರಂದು ಕತಾರ್ ನ್ಯಾಯಾಲಯವು 8 ಭಾರತೀಯರಿಗೆ ಮರಣದಂಡನೆ ವಿಧಿಸಿತ್ತು. ಭಾರತವು ಈ ನಿರ್ಧಾರವನ್ನು ಆಘಾತಕಾರಿ ಎಂದು ವಿವರಿಸಿದೆ ಮತ್ತು ಈ ವಿಷಯದಲ್ಲಿ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುವುದಾಗಿ ತಿಳಿಸಿತ್ತು. ಮರಣದಂಡನೆಯ ವಿರುದ್ಧ ಕತಾರ್ನಲ್ಲಿ ನವೆಂಬರ್ 9 ರಂದು ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಪ್ರಯತ್ನಿಸುತ್ತಿದೆ. ಈ ತೀರ್ಪು ಗೌಪ್ಯವಾಗಿದ್ದು, ಕಾನೂನು ತಂಡದೊಂದಿಗೆ ಮಾತ್ರ ಚರ್ಚಿಸಲಾಗುತ್ತಿದೆ.