ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತೊರೆಯುವಂತೆ ಅಧಿಕೃತ ಹೇಳಿಕೆ ನೀಡಿದೆ.
ವಿಶ್ವಸಂಸ್ಥೆಯ 78ನೇ ಜನರಲ್ ಅಸೆಂಬ್ಲೆಯಲ್ಲಿ ಪಾಕಿಸ್ತಾನ ಮಧ್ಯಂತರ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಕಾಶ್ಮೀರ ವಿಚಾರ ಕೆದಕಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ವಿಶ್ವಸಂಸ್ಥೆಯ ಭಾರತದ ಸೆಕ್ರೆಟರಿ ಪೀಟಲ್ ಗೆಹ್ಲೋಟ್,ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುವ ಪಾಕಿಸ್ತಾನ, ಭಾರತದ ವಿರುದ್ಧ ಮಾತನಾಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆ ನಿಲ್ಲಿಸಬೇಕು. ಇಷ್ಟೇ ಅಲ್ಲ ಪಾಕಿಸ್ತಾನ ಅಕ್ರಮಿತ ಕಾಶ್ಮೀರ ಪ್ರದೇಶ ತೊರೆಯಬೇಕು. ಇದು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಪೀಟಲ್ ಗೆಹ್ಲೋಟ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭಾರತದ ಕೇಂದ್ರಾಡಳಿತ ಪ್ರದೇಶ. ಭಾರತದ ಅವಿಭಾಜ್ಯ ಅಂಗ. ಇಲ್ಲಿನ ಅಭಿವೃದ್ಧಿ, ಮೂಲಭೂತ ಸೌಕರ್ಯ ಕಲ್ಪಿಸುವುದು ಭಾರತದ ಆತಂರಿಕ ವಿಚಾರ. ಪಾಕಿಸ್ತಾನ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ಖಡಕ್ ಆಗಿ ಹೇಳಿದೆ.
ಭಾರತದ ವಿಚಾರದಲ್ಲಿ ಮಾತನಾಡುವ ಪಾಕಿಸ್ತಾನ, 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಆರೋಪಿಗಳು, ಪ್ರಕರಣದ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣ ನಿಲ್ಲಿಸಲು ಕ್ರಮಕೈಗೊಳ್ಳಲಿ. ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಪಾಲನೆ ಅತ್ಯಂತ ಕೆಟ್ಟದಾಗಿದೆ. ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಹಕ್ಕುಗಳ ಪಾಕಿಸ್ತಾನದಲ್ಲಿ ನರಕಕ್ಕೆ ಸಮಾನ ಎಂದು ಭಾರತ ಹೇಳಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳು ಮಾತ್ರವಲ್ಲ, ಕ್ರಿಶ್ಟಿಯನ್ನರು ದಾಳಿಗೊಳಗಾಗಿದ್ದಾರೆ. ಆಗಸ್ಟ್ 2023ರಲ್ಲಿ 19 ಚರ್ಚ್ಗಳನ್ನು ಧ್ವಂಸ ಮಾಡಲಾಗಿದೆ. 89ಕ್ಕೂ ಹೆಚ್ಚು ಕ್ರಿಶ್ಚಿಯನ್ ಸಮುದಾಯದ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂದು ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗುತ್ತದೆ. ಅಪಹರಣ ಮಾಡಿ ಚಿತ್ರಹಿಂಸೆ ನೀಡಲಾಗುತ್ತದೆ. ಹಿಂದು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಮತಾಂತರ ಮಾಡಿ ಮದುವೆ ಮಾಡಲಾಗುತ್ತದೆ. ಕಳೆದ ಕೆಲ ತಿಂಗಳಲ್ಲಿ 1,000ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ, ಅಪಹರಣ, ಮತಾಂತರ ಮಾಡಲಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮಾನ ಹರಾಜು ಹಾಕಿದೆ.