ಹೊಸದಿಗಂತ ವರದಿ ಮಂಡ್ಯ :
ಭಾರತ್ ತೇರೆ ತುಕಡೇ ಹೊಂಗೆ…ಅನ್ನೋ ದೇಶವಿರೋಧಿ ಘೋಷಣೆ ಕೂಗಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಕನ್ನಯ್ಯಕುಮಾರ್ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಜೊತೆ ಜೊತೆಯಲ್ಲಿ ಎನ್ನುವ ರೀತಿಯಲ್ಲಿ ಭಾಗವಹಿಸಿರುವುದು ಭಾರತ್ ಜೋಡೋ ಯಾತ್ರೆಯೋ ಅಥವಾ ತೋಡೋ ಯಾತ್ರೆಯೋ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಟೀಕಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸತ್ ದಾಳಿ ರೂವಾರಿ, ನೇಣಿಗೇರಿದ ಉಗ್ರ ಅಫ್ಜಲ್ ಗುರು ಪರವಾಗಿ ಮಾತನಾಡಿದ ಕನ್ನಯ್ಯಕುಮಾರ್, ಅಫ್ಜಲ್ ಗುರುನನ್ನು ನೇಣು ಹಾಕಿದ ನಂತರ ಸಾರ್ವತ್ರಿಕವಾಗಿ ಅಫ್ಜಲ್ ಹಮ್ ಶರ್ಮಿಂದಾ ಹೈ ತೇರಾ ಕಾತಿಲ್ ಜಿಂದಾಹೈ ಅನ್ನೋ ಭಯೋತ್ಪಾದನೆಗೆ ಬೆಂಬಲ ಕೊಡುವಂತಹ ಘೋಷಣೆ ಕೂಗಿದ್ದಾನೆ. ಇಂತಹ ವ್ಯಕ್ತಿಯನ್ನು ಜೊತೆಯಲ್ಲಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.
ಹೈದರಾಬಾದ್ನ ಅಸಾವುದ್ದೀನ್ ಓವೈಸಿ ಪಕ್ಷದ ಕಾರ್ಯಕ್ರಮದ ವೇದಿಕೆ ಮೇಲೆ ಬಾಲಕಿಯೊಬ್ಬಳು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ದೇಶದಲ್ಲಿ ಭಾರೀ ಸುದ್ಧಿಯಾಗಿತ್ತು. ಆ ಹೆಣ್ಣು ಮಗುವಿನ ಹೆಗಲ ಮೇಲೆ ಕೈ ಹಾಕಿಕೊಂಡು ರಾಗಾ ಅವರು ಜೋಡೋ ಯಾತ್ರೆಯಲ್ಲಿ ಕರೆದೊಯ್ಯುತ್ತಿರುವುದನ್ನು ನೋಡಿದರೆ ಏನು ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ದೇಶದ್ರೋಹಿಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಯಾವ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದೀರಿ, ಇದನ್ನು ದೇಶದ್ರೋಹಿಗಳೊಟ್ಟಿಗಿನ ಪಾದಯಾತ್ರೆ ಎಂಬುದಾಗಿ ಹೆಸರು ಬದಲಿಸಿಕೊಳ್ಳಿ ಎಂದು ಕಾಂಗ್ರೆಸ್ಸಿಗರಿಗೆ ಸಲಹೆ ನೀಡಿದ್ದಾರೆ.