ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಲೆಯಿಲ್ಲದ, ಗೊಂದಲಕ್ಕೀಡಾಗಿರುವ ನಾಯಕ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಪ್ರಬುದ್ಧತೆ ಇಲ್ಲದಂತೆ ಏನೇನೋ ಮಾತನಾಡುತ್ತಾರೆ. ಭಾರತ ರಾಷ್ಟ್ರ ಅಲ್ಲ ಎನ್ನುತ್ತಾರೆ, ಚೀನಾ ದೃಷ್ಟಿಕೋನ ಸ್ಪಷ್ಟವಾಗಿದೆ ಎನ್ನುತ್ತಾರೆ. ಚೀನಾ ಬೆಂಬಲಿಸೋಕೆ ಸಂಸತ್ಗೆ ಬಂದಿದ್ದರಾ ರಾಹುಲ್ ಗಾಂಧಿ ಎಂದು ಜೋಶಿ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ದೂರ ದೂರ ಇರುವಂತೆ ನೋಡಿಕೊಳ್ಳುವುದು ಭಾರತದ ವಿದೇಶಾಂಗ ನೀತಿಯ ಏಕೈಕ ಗುರಿಯಾಗಿರಬೇಕಿತ್ತು. ಆದರೆ ಮೋದಿ ಸರ್ಕಾರ ಮಾಡಿದ್ದೆಲ್ಲಾ ಉಲ್ಟಾ, ಅವರಿಬ್ಬರನ್ನು ಹತ್ತಿರಕ್ಕೆ ತಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಅಷ್ಟೇ ಅಲ್ಲದೆ ಗಣರಾಜ್ಯೋತ್ಸವಕ್ಕೆ ಯಾವುದೇ ಗಣ್ಯ ಅತಿಥಿ ಹೊದಿಲ್ಲ. ನಮ್ಮ ದೇಶ ದ್ವೀಪದಂತೆ ಪ್ರತ್ಯೇಕಗೊಂಡಿದೆ. ಸುತ್ತಲೂ ವೈರಿಗಳೇ ಇದ್ದಾರೆ. ಇದು ನಮ್ಮ ವೈರಿಗಳಿಗೂ ಗೊತ್ತಿದೆ ಎಂದು ರಾಹುಲ್ ಹೇಳಿದ್ದರು. ಇದಕ್ಕೆ ಜೋಶಿ ಪ್ರತ್ಯುತ್ತರ ನೀಡಿ, ರಾಗಾಗೆ ನೆನಪಿನ ಶಕ್ತಿ ಹೋಗಿದೆ. ಭಾರತ ಅಷ್ಟೇ ಅಲ್ಲ, ಇಡೀ ಜಗತ್ತನ್ನೇ ಕೊರೋನಾ ಬಾಧಿಸಿದೆ. ಎಲ್ಲ ರಾಷ್ಟ್ರಗಳು ಕೊರೋನಾದಿಂದ ದ್ವೀಪದಂತೆ ಪ್ರತ್ಯೇಕಗೊಂಡಿವೆ. ಇದೇ ಕಾರಣಕ್ಕೆ ಎರಡು ವರ್ಷದಿಂದ ಗಣರಾಜ್ಯೋತ್ಸವಕ್ಕೆ ಅತಿಥಿಗಳನ್ನೂ ಕರೆದಿಲ್ಲ ಎಂದು ಹೇಳಿದ್ದಾರೆ.