ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಬಜೆಟ್ ಕುರಿತು ಮಾತನಾಡಿದರು.
ಈ ವೇಳೆ ಬಜೆಟ್ ಮಂಡನೆಗೂ ಮುನ್ನ ಹಲ್ವಾ ತಯಾರಿಸಿ ಹಂಚಿಕೆ ಮಾಡೋದು ಸಂಪ್ರದಾಯ. ಈ ವಿಷಯದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತಂದರು.
ಅಧಿವೇಶನಲ್ಲಿ ಹಲ್ವಾ ವಿತರಣೆಯ ಫೋಟೋವನ್ನು ರಾಹುಲ್ ಗಾಂಧಿ ಪ್ರದರ್ಶಿಸಿದರು. ಫೋಟೋ ಪ್ರದರ್ಶನಕ್ಕೆ ಸ್ಪೀಕರ್ ಓಂ ಬಿರ್ಲಾ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಫೋಟೋಗೆ ಯಾಕೆ ಹೆದರುತ್ತಿದ್ದಾರೆ. ಫೋಟೋ ತೋರಿಸುತ್ತಿದ್ದಂತೆ ಕ್ಯಾಮೆರಾ ಆಫ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಂತರ ರಾಹುಲ್ ಗಾಂಧಿಯವರು ಫೋಟೋವನ್ನು ಮೇಜಿನ ಮೇಲಿರಿಸಿ ತಮ್ಮ ಮಾತು ಮುಂದುವರಿಸಿದರು. ಈ ಫೋಟೋದಲ್ಲಿ ಏನಿದೆ ಎಂಬುದನ್ನು ವಿವರಿಸಲು ನಾನು ಇಷ್ಟಪಡುತ್ತೇನೆ. ಈ ಫೋಟೋದಲ್ಲಿ ನನಗೆ ಒಬ್ಬ ಒಬಿಸಿ, ಒಬ್ಬ ಆದಿವಾಸಿ ಮತ್ತು ಒಬ್ಬ ದಲಿತ ಅಧಿಕಾರಿ ಕಾಣಿಸುತ್ತಿಲ್ಲ. ಇಲ್ಲಿ ಏನು ನಡೆಯುತ್ತಿದೆ ಎಂಬವುದು ಗೊತ್ತಾಗುತ್ತಿಲ್ಲ ಸ್ಪೀಕರ್ ಸರ್? ಇಲ್ಲಿ ದೇಶದ ಹಲ್ವಾ ಹಂಚಿಕೆ ಮಾಡಲಾಗುತ್ತಿದೆ. ಇದರಲ್ಲಿ ಶೇ.73ರಷ್ಟು ಇಲ್ಲವೇ ಇಲ್ಲ ಎಂದರು.
ರಾಹುಲ್ ಗಾಂಧಿಯವರ ಈ ಮಾತು ಕೇಳುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಹಣೆ ಚಚ್ಚಿಕೊಂಡು ತಲೆ ಬಾಗಿಸಿದರು. ಸರ್, ನೀವೆಲ್ಲರೂ ಹಲ್ವಾ ತಿನ್ನುತ್ತಿದ್ದೀರಿ. ಆದ್ರೆ ಇನ್ನುಳಿದ ವರ್ಗಕ್ಕೆ ಹಲ್ವಾ ಸಿಗುತ್ತಿಲ್ಲ ಎಂದು ಪರೋಕ್ಷವಾಗಿ ತಾರತಮ್ಯದ ವಿಚಾರವನ್ನು ರಾಹುಲ್ ಗಾಂಧಿ ಪ್ರಸ್ತಾಪಿಸಿದರು.
20 ಜನರು ಸೇರಿ ಬಜೆಟ್ ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಆ 20 ಜನರ ಹೆಸರು ನನ್ನ ಬಳಿಯಲಿದ್ದು, ಅವಶ್ಯಕತೆ ಇದ್ರೆ ಹೇಳುವೆ. 20 ಅಧಿಕಾರಿಗಳು ಇಡೀ ಹಿಂದೂಸ್ಥಾನದ ಬಜೆಟ್ ಸಿದ್ಧಪಡಿಸಿದ್ದಾರೆ. ಅಂದ್ರೆ ದೇಶದ ಹಲ್ವಾ 20 ಜನರಿಗೆ ಮಾತ್ರ ಹಂಚುವ ಕೆಲಸ ನಡೆಯುತ್ತಿದೆ. ಈ 20 ಅಧಿಕಾರಿಗಳಲ್ಲಿ ಶೇ.90ರಷ್ಟು ಜನರಲ್ಲಿ ಇಬ್ಬರಿದ್ದಾರೆ. ಒಬ್ಬರು ಅಲ್ಪಸಂಖ್ಯಾತ ಮತ್ತು ಮತ್ತೋರ್ವ ಓಬಿಸಿ. ಈ ಫೋಟೋದಲ್ಲಿ ಒಬ್ಬರು ಕಾಣಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.