ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಎಂಟ್ರಿ ನೀಡಿದ್ದು, ಜನರನ್ನು ತಂಪೆರೆದಿದ್ದಾನೆ. ಆದರೆ ಬಿಸಿಲ ನಾಡು ರಾಯಚೂರಲ್ಲಿ ಸದ್ಯ ಮಳೆಯ ಸೂಚನೆ ಇಲ್ಲ. ಬಿಸಿಲಿನ ತಾಪದ ತೀವ್ರತೆ ಹೆಚ್ಚಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಎರಡು ಪ್ರತ್ಯೇಕ ಘಟನೆಗಳಲ್ಲಿ ಮಲ್ಲಯ್ಯ (45) ಹಾಗೂ ಆಂಜನೇಯ ಎನ್ನುವವರು ಮೃತಪಟ್ಟಿದ್ದಾರೆ. ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಬಿಎಂಟಿಸಿ ಕಂಡಕ್ಟ್ ಆಗಿದ್ದ ಮಲ್ಲಯ್ಯ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಲ್ಲಯ್ಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ನಿವಾಸಿ ಆಗಿದ್ದರು. ಇವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಮಧ್ಯಾಹ್ನದ ವೇಳೆ ಮಸ್ಕಿ ಪಟ್ಟಣದಲ್ಲಿ ಕಿರಾಣಿ ಸಾಮಾನು ತರಲು ಬಂದಾಗ ದುರಂತ ನಡೆದಿದೆ. ರಸ್ತೆಯಲ್ಲಿ ಕುಸಿದು ಬಿದ್ದ ತಕ್ಷಣ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಇತ್ತ, ರಾಯಚೂರು ತಾಲೂಕಿನ ಜಾಲಿಬೆಂಚಿಯಲ್ಲಿ ಅಂಜನೇಯ (45) ಎಂಬುವವರು ಮೃತಪಟ್ಟಿದ್ದಾರೆ. ಹೊಲದಿಂದ ಕೆಲಸ ಮುಗಿಸಿ ಮನೆಗೆ ಬರುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಬಿಸಿಲಿನ ಆರ್ಭಟ ತಾಳಲಾರದೇ ಸುಸ್ತಾಗಿ ಮೃತಪಟ್ಟಿದ್ದಾರೆ.