ಹೊಸದಿಗಂತ ವರದಿ ಹಾವೇರಿ:
ಒಂದೆಡೆ ರಣ ಬಿಸಿಲು, ಬರ. ಇನ್ನೊಂದೆಡೆ ಕೃಷಿಕರ ನೆಚ್ಚಿನ ಮಾಡಲೇ ಬೇಕಾದ ಸೀಗೆ ಹುಣ್ಣಿವೆ. ಈಗ ಸೀಗೆ ಹುಣ್ಣಿಮೆ ಕೂಡ ಬರದ ಹಿನ್ನೆಲೆಯಲ್ಲಿ ಸಿಹಿ ಕಳೆದುಕೊಂಡು ಸಪ್ಪೆ ಎನಿಸತೊಡಗಿದೆ.
ಆದರೆ ಕೃಷಿಕರನ್ನೆ ನಂಬಿಕೊಂಡು ನಡೆಯುವ ಹತ್ತಾರು ವ್ಯವಹಾರಗಳ ಮೇಲೆ ಕೂಡ ಬರಗಾಲದ ಕರಿನೆರಳು ಬಿದ್ದಂತಾಗಿದೆ. ಸೀಗೆ ಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ಅಲಂಕರಿಸುವ, ಎತ್ತಿನ ಬಂಡಿಗಳನ್ನು ನವವಧುವಿನಂತೆ ಸಿಂಗರಿಸಿಕೊಂಡು ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಊಟ ಸವಿಯುತ್ತಿದ್ದರು.
ಆದರೆ ಮಳೆ ಕೊರತೆ, ಸಿಗದ ಪರಿಹಾರದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದು ಸೀಗೆ ಹುಣ್ಣಿಮೆ ಸಂಭ್ರಮಕ್ಕೆ ಕಡಿವಾಣ ಹಾಕಿದ್ದಾರೆ.
ಇದರ ನೇರ ಪರಿಣಾಮ ಇದೀಗ ಅಲಂಕಾರಿಕ ಸಾಮಗ್ರಿ ಮಾರಾಟಗಾರರ ಮೇಲೆ ಬಿದ್ದಿದ್ದು ಅವರು ವ್ಯಾಪಾರ ಇಲ್ಲದೇ ಕೈ ಕೈ ಹಿಸುಕಿಕೊಳ್ಳುವಂತಾದೆ.
ಸೀಗೆ ಹುಣ್ಣಿಮೆ ಮತ್ತು ದೀಪಾವಳಿ ವೇಳೆ ಮಕ್ಕಾಡ, ಹೂವಿನ ಕೊಂಬರಸ, ಕಾಲ್ಗೆಜ್ಜೆ, ಕೊರಳಗೆಜ್ಜೆ, ಹಣೇಪಟ್ಟಿ ಮಾಲೆ, ಜೂಲ, ಸೆರಗಿನ ಸರ, ಮೂಗುದಾರ, ಕರೆ ಉಣ್ಣಿ ಮಾಲೆ, ಹಗ್ಗ ಹೀಗೆ ತರಾವರಿ ಸಾಮಗ್ರಿಗಳನ್ನು ಕೃಷಿಕರಿಗೆ ಮಾರಿ ಉದರ ಪೋಷಣೆ ಮಾಡಿಕೊಳ್ಳುತ್ತಾರೆ. ಆದರೆ ಈಗ ಬರದ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ನಡೆಸುವುದೇ ಕಷ್ಟಕರ ಎಂಬಂತಾಗಿದೆ.