ಬಾಲ್ಯದ ನೆನಪು ಮೆಲುಕು ಹಾಕಿದ ರಜನಿಕಾಂತ್: ಕನ್ನಡ ವಿದ್ಯಾರ್ಥಿ ಎನ್ನುವುದು ಹೆಮ್ಮೆಯ ಸಂಗತಿ ಎಂದ ಸೂಪರ್ ಸ್ಟಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಶಾಲಾ ದಿನಗಳು ಕುರಿತು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ.

ಬೆಂಗಳೂರು ಎಂದರೆ ಸೂಪರ್ ಸ್ಟಾರ್ ರಜನಿಕಾಂತ್​ಗೆ ಎಲ್ಲಿಲ್ಲದ ಪ್ರೀತಿ. ಏಕೆಂದರೆ ತಮ್ಮ ಬಾಲ್ಯದ ಜೀವನ ಆರಂಭವಾಗಿದ್ದೆ ಬೆಂಗಳೂರಿನಲ್ಲಿ. ಈ ಸಿಲಿಕಾನ್ ಸಿಟಿಯಲ್ಲೇ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ತಮ್ಮ ಮುಂದಿನ ಬದುಕು ಆರಂಭಿಸಿದ್ದರು. ಇದರಿಂದ ಅವರ ಬಾಲ್ಯದ ನೆನಪುಗಳನ್ನು ಹಿರಿಯ ನಟ ಮೆಲುಕು ಹಾಕಿದ್ದಾರೆ. ಅಲ್ಲದೇ ರಜನಿಕಾಂತ್ ಮೊದಲು ಕನ್ನಡ ಮೀಡಿಯಂ ವಿದ್ಯಾರ್ಥಿ ಎನ್ನುವುದು ಹೆಮ್ಮೆಯ ಸಂಗತಿಯೇ ಸರಿ.

ತಮ್ಮ ಶಾಲಾ ದಿನಗಳು ಕುರಿತು ರಜನಿಕಾಂತ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಎಪಿಎಸ್ ಸ್ಕೂಲ್ ಮತ್ತು ಕಾಲೇಜಿನಲ್ಲಿ ಓದಿದಕ್ಕೆ ನನಗೆ ಈಗಲೂ ತುಂಬಾ ಹೆಮ್ಮೆ ಇದೆ. ಮೊದಲು ನಾನು ಗವಿಪುರದಲ್ಲಿರುವ ಗಂಗಧಾರೇಶ್ವರ ದೇವಾಲಯದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ. ನಾನು ಕ್ಲಾಸ್‌ಗೆ ಫಸ್ಟ್, ಬೆಸ್ಟ್ ಸ್ಟುಡೆಂಟ್, ಕ್ಲಾಸ್‌ಗೆ ನಾನೇ ಮಾನಿಟರ್ ಆಗಿದ್ದೆ. ಮಿಡಲ್ ಸ್ಕೂಲ್‌ನಲ್ಲಿ 98% ಸ್ಕೋರ್ ಮಾಡಿದ್ದೆ ಎಂದು ರಜನಿಕಾಂತ್ ಗರ್ವದಿಂದ ಹೇಳಿಕೊಂಡಿದ್ದಾರೆ.

ಸ್ಕೂಲ್‌ನಲ್ಲಿ ತುಂಬಾ ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡಿದ್ದಕ್ಕೆ ನಮ್ಮ ಅಣ್ಣ, ನನ್ನನ್ನು ಇಂಗ್ಲಿಷ್ ಮೀಡಿಯಂಗೆ ಎಪಿಎಸ್ ಹೈಸ್ಕೂಲ್‌ಗೆ ಸೇರಿಸಿಬಿಟ್ಟರು. ಇದರಿಂದ ನಾನು ಡಲ್ ಆಗಿ ಹೋಗಿಬಿಟ್ಟೆ. ಮೊದಲ ಬೆಂಚ್‌ನಲ್ಲಿದ್ದ ಸ್ಟುಡೆಂಟ್ ಕೊನೆ ಬೆಂಚ್‌ಗೆ ಬಂದು ಬಿಟ್ಟೆ. ಇದರಿಂದ ಡಿಪ್ರೆಶನ್‌ಗೆ ಹೋದೆ. ಆದರೆ ಎಪಿಎಸ್ ಸ್ಕೂಲ್- ಕಾಲೇಜಿನಲ್ಲಿ ಶಿಕ್ಷಕರು ನನ್ನ ಮೇಲೆ ಸಾಕಷ್ಟು ಅಭಿಮಾನ ತೋರಿಸಿದರು. ಕರುಣೆ ತೋರಿಸಿ, ಪ್ರೀತಿಯಿಂದ ಪಾಠ ಹೇಳಿದರು. ಇದರಿಂದ ನಾನು 8, 9ನೇ ತರಗತಿಯನ್ನು ಪಾಸ್ ಮಾಡಿದೆ. ಆದರೆ 10ನೇ ತರಗತಿಯಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ.

10ನೇ ತರಗತಿಯಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದರಿಂದ ಓದುವುದರಲ್ಲಿ ಬಹಳ ವೀಕ್ ಆಗಿದ್ದೆ. ಇದರಿಂದ ಈ ವಿಷಯಗಳಲ್ಲಿ ಫೇಲ್ ಆಗಿದ್ದೆ. ಆವಾಗ ನಮ್ಮ ಕೆಮಿಸ್ಟ್ರೀ ಟೀಚರ್, ಮನಗೆ ಬಂದು 6 ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಉಚಿತವಾಗಿ, ಸ್ಪೆಷಲ್ ಇಂಟ್ರೆಸ್ಟ್ ತೆಗೆದುಕೊಂಡು ಕ್ಲಾಸ್ ಮಾಡುತ್ತಿದ್ದರು. ಹೀಗಾಗಿ 10ನೇ ಕ್ಲಾಸ್ ಪಾಸ್ ಮಾಡಿದೆ. ಇದಾದ ಮೇಲೆ ಅಲ್ಲೇ ಎಪಿಎಸ್ ಕಾಲೇಜಿಗೆ ಸೇರಿದೆ. ಆದರೆ ಆ ಮೇಲೆ ಕೆಲ ಕಾರಣಗಳಿಂದ ಕಾಲೇಜು ಕಂಟಿನ್ಯೂ ಮಾಡಲಾಗಲಿಲ್ಲ ಎಂದು ನೆನಪು ಮಾಡಿಕೊಂಡರು.

ಎಪಿಎಸ್ ಹೈಸ್ಕೂಲ್‌ನಲ್ಲಿ ಓದುವಾಗ ಪ್ರತಿ ವರ್ಷದಂತೆ ಇಂಟರ್ ಹೈಸ್ಕೂಲ್ ಡ್ರಾಮಾಗಳು ನಡೀತಾ ಇತ್ತು. ಇದರಲ್ಲಿ 10, 15 ಶಾಲೆಗಳು ಭಾಗಿಯಾಗಿದ್ದವು. ನಾನು ಶಾಲೆಗೆ ಲೇಟ್ ಆಗಿ ಬಂದಾಗ ಟೀಚರ್ ಬಳಿ, ಯಾವುದಾದರೂ ಸಿನಿಮಾ ನೋಡಿದ್ದು, ನಾಟಕ ನೋಡಿದ್ದನ್ನ ನಟನೆ ಮಾಡಿ, ಕಥೆ ಹೇಳುತ್ತಿದ್ದರಿಂದ ಎಲ್ಲರಿಗೂ ತುಂಬಾ ಇಷ್ಟ ಆಗಿದ್ದೆ. ಇದು ಶಿಕ್ಷಕರಿಗೆ ಗೊತ್ತಾಗಿತ್ತು. ಹೀಗಾಗಿ ಇಂಟರ್ ಹೈಸ್ಕೂಲ್ ಡ್ರಾಮಾ ಕಾರ್ಯಕ್ರದಮಲ್ಲಿ ನೀನು ಡ್ರಾಮಾ ಮಾಡಬೇಕು ಎಂದು ಹೇಳಿದ್ದರು ಅಂತ ನಟನೆಯ ಮೊದಲ ಎಳೆ ಹೇಗೆ ಪ್ರಾರಂಭ ಆಯಿತು ಅಂತ ನಟ ಹೇಳಿಕೊಂಡರು.

ಆದಿ ಶಂಕರಚಾರ್ಯರು ಚಂಡಾಲನನ್ನು ಭೇಟಿ ಆಗುವ ನಾಟಕ ಅನ್ನು ಮಾಡಿದ್ದೆವು. ಇದರಲ್ಲಿ ನಾನು ಚಂಡಾಲನ ಪಾತ್ರ ಮಾಡಿದ್ದೆ. ನಮ್ಮ ಡ್ರಾಮಾಕ್ಕೆ ಪ್ರಶಸ್ತಿ ಬಂತು. ಆವಾಗಲೇ ನನಗೆ ಬೆಸ್ಟ್ ಆಕ್ಟರ್ ಎಂಬ ಪ್ರಶಸ್ತಿ ಕೊಟ್ಟಿದ್ದರು. ಅದೇ ನನಗೆ ವೃತ್ತಿ ಆಗಿ ಈಗ ನನಗೆ ಸಾಧ್ಯವಾದಷ್ಟು ನಟನೆ ಮಾಡಿ ಎಲ್ಲರನ್ನು ರಂಜಿಸುತ್ತಿದ್ದೇನೆ. ಅದಕ್ಕೆ ಕಾರಣ ಎಪಿಎಸ್ ಹೈಸ್ಕೂಲ್. ಅವಾಗ ಅಲ್ಲಿ ನಾವು ಆಡಿದ ಆಟ, ಕ್ರಿಕೆಟ್, ಖೋಖೋ, ಕಬ್ಬಡ್ಡಿ ಈ ಎಲ್ಲ ಮರೆಯೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ಮನೆಯಿಂದ ಶಾಲೆಗೆ ಹೋಗಬೇಕಾದರೆ ದೊಡ್ಡ ಗಣೇಶ, ಬಸವನಗುಡಿ ಅಲ್ಲಿ ಓಡಾಡಿರುವುದೆಲ್ಲ ಈಗಲೂ ನನ್ನ ಮನಸಿಲ್ಲಿ ಹಚ್ಚ ಹಸಿರಾಗಿದೆ. ತುಂಬಾ ಹೆಮ್ಮೆ ಇದೆ. ಮುಂದಿನ ಬಾರಿ ಬಂದಾಗ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಎಪಿಎಸ್ ಹೈಸ್ಕೂಲ್ ಸಿಬ್ಬಂದಿಗೆ ತಿಳಿಸಿದ್ದಾರೆ. ಅಲ್ಲದೇ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕಾ, ಬೇಡ್ವಾ ಎಂದು ಕೇಳಿದ್ದಕ್ಕೆ, ಧಾರಾಳವಾಗಿ ಪೋಸ್ಟ್ ಶೇರ್ ಮಾಡಿ ಎಂದು ಹೇಳಿದ್ದೇನೆ ಎಂದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!