ಹೊಸದಿಗಂತ ವರದಿ, ಮಂಗಳೂರು:
ಭಾರತದ ರಾಷ್ಟ್ರೀಯ ಭಾವದ ಪ್ರಕಟೀಕರಣ ರಾಮ ಮಂದಿರ, ಇದು ಕೇವಲ 500 ವರ್ಷಗಳ ಹೋರಾಟದ ಕತೆಯಲ್ಲ. ಇಡೀ ದೇಶದ, ಹಿಂದು ಸಮಾಜದ ಭಾವನೆಯ ಯಾತ್ರೆ ಎಂದು ರಾಷ್ಟ್ರೀಯ MIT ಪ್ರೋಫೆಸರ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಮಂಗಳೂರು ವಿಭಾಗ ಕಾರ್ಯವಾಹರಾದ ಡಾ. ವಾದಿರಾಜ್ ಹೇಳಿದರು.
ಮಂಗಳವಾರ ಕಾವೂರು ಸ್ವಸಹಾಯ ಸಂಘದಲ್ಲಿ ನಡೆದ ‘ಮಂಥನ’ ವೈಚಾರಿಕ ವೇದಿಕೆಯ ಕಾವೂರು ನಗರದ ಮೊದಲ ತಿಂಗಳ ಚೊಚ್ಚಲ ಕಾರ್ಯಕ್ರಮದಲ್ಲಿ ” ರಾಮ ಮಂದಿರ – ರಾಷ್ಟ್ರ ಮಂದಿರ : ಪ್ರಾಚೀನ ಭಾರತದ ಆಧುನಿಕ ಸಂಕೇತ” ಎಂಬ ವಿಷಯದ ಕುರಿತು ವಿಷಯ ಮಂಡಿಸಿದರು.
ರಾಮ ಮಂದಿರ ಹೊರಗಣ್ಣಿಗೆ ಮಾತ್ರ ಕಳೆದುಕೊಂಡಿದ್ದೆವು ಆದರೆ ಸಮಸ್ತ ಹಿಂದು ಸಮಾಜದ ಒಳಗಣ್ಣಿನಲ್ಲಿ ಸದಾ ಹಾಗೆಯೇ ಇತ್ತು.ಇದು ಕೇವಲ ಜನರ ಪುಣ್ಯಪ್ರಾಪ್ತಿಗೆ, ಭಕ್ತಿಭಾವಗಳ ಪ್ರಕಟೀಕರಣಕ್ಕಾಗಿ ಒಂದು ಮಂದಿರವಲ್ಲ. ಈ ಸಹಸ್ರಮಾನದ ಪ್ರಾರಂಭದಲ್ಲಿ ಮುಂದಿನ ಪೀಳಿಗೆಯ ಭಾರತೀಯ ಯುವ ಜನತೆಗೆ ಒಂದು ದಿಕ್ಸೂಚಿ.
ರಾಮನಿಗೆ ಕೇವಲ 14 ವರ್ಷ ವನವಾಸ ಆದರೆ ರಾಮ ಭಕ್ತರ 500 ವರ್ಷದ ವನವಾಸದ ನಂತರ ಇಂದು ಭವ್ಯವಾಗಿ ಪ್ರತಿಷ್ಠಾಪನೆ ಆಗುವುದರ ಮೂಲಕ ರಾಷ್ಟ್ರೀಯ ಭಾವಕ್ಕೆ ದೊಡ್ಡ ನೆಗೆತ ನೀಡಿದೆ. ಸಾಂವಿಧಾನಿಕ ವ್ಯವಸ್ಥೆಯಲ್ಲಿ ನಿರ್ಮಾಣಗೊಂಡ ರಾಮ ಮಂದಿರ ಉದ್ಘಾಟನೆಗೊಂಡ ಈ ಶುಭ ಸಂದರ್ಭದಲ್ಲಿ ಭಾರತೀಯರಾದ ನಾವೆಲ್ಲ ‘ಸ್ವ’ತ್ತ್ವ ವನ್ನು ಜಾಗ್ರತಿಗೊಳಿಸಿಕೊಂಡು ರಾಮಂದಿರವನ್ನು ಉಳಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ ಹೆಗಡೆ ವೈದ್ಯಕೀಯ ಕಾಲೇಜಿನ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ರಾವ್ ಅವರು ವಹಿಸಿದ್ದರು. ಗಣೇಶ್ ಚೇತನ್ ಇವರು ರಾಮಮಂದಿರ ವಿಶೇಷಾಂಕ ಪುಸ್ತಕ ಪರಿಚಯ ಮಾಡಿಕೊಟ್ಟರು. ಸಚಿನ್ ಸ್ವಾಗತಿಸಿದರೆ ಶಶಿಧರ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.