ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಮಂದಿರದತ್ತ ಭಕ್ತ ಸಾಗರ ಹರಿದುಬರುತ್ತಿದ್ದು,ಜನಸಾಗರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಿರುಪತಿ ತಿರುಮಲ ದೇವಸ್ಥಾನಂ (TTD) ತನ್ನ ವರದಿ ನೀಡಿದೆ.
ಮೂಲಗಳ ಪ್ರಕಾರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕೋರಿಕೆಯ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಎಂಜಿನಿಯರ್ಗಳ ತಂಡವು ಅಯೋಧ್ಯೆಗೆ ಭೇಟಿ ನೀಡಿದ್ದು, ಜನಸಂದಣಿ ನಿರ್ವಹಣೆಯ ಕುರಿತು ಟ್ರಸ್ಟ್ಗೆ ತಾಂತ್ರಿಕ ಸಲಹೆಗಳನ್ನು ನೀಡಿದೆ.
ಜನಸಂದಣಿ ನಿರ್ವಹಣೆ, ಸರತಿ ಸಾಲಿನ ವ್ಯವಸ್ಥೆ, ನೀರಿನ ವ್ಯವಸ್ಥೆ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಕುರಿತು ತಾಂತ್ರಿಕ ಸಲಹೆಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಟ್ರಸ್ಟ್ಗೆ ಸಲ್ಲಿಸಲಾಗಿದೆ ಎಂದು ಟಿಟಿಡಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರುವರಿ 16 ಮತ್ತು 17ರಂದು ಟಿಟಿಡಿಯ ತಂಡ ರಾಮಮಂದಿರಕ್ಕೆ ಭೇಟಿ ನೀಡಿದ್ದು, ತಿರುಮಲದ ಹಾಗೆ ಭಕ್ತರಿಗೆ ತೊಂದರೆ ಮುಕ್ತ ದರುಶನಕ್ಕೆ ವ್ಯವಸ್ಥೆ ಕಲ್ಪಿಸುವ ಕುರಿತು ಟ್ರಸ್ಟ್ ಕೆಲ ಸಲಹೆಗಳನ್ನು ನೀಡಿತ್ತು. ಇದರ ಭಾಗವಾಗಿ ಏಪ್ರಿಲ್ 13ರಂದು ಸಭೆ ನಡೆದಿದ್ದು, ಟಿಟಿಡಿಯ ತಾಂತ್ರಿಕ ಸಲಹೆಗಾರ ರಾಮಚಂದ್ರ ರೆಡ್ಡಿ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.
ರಾಮ ಮಂದಿರ ಟ್ರಸ್ಟ್ ಪರವಾಗಿ ಚಂಪತ್ ರಾಯ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗೋಪಾಲಜಿ ಮತ್ತು ಇತರರು ಭಾಗವಹಿಸಿದ್ದರು.