ಹೊಸದಿಗಂತ ವರದಿ, ಮಡಿಕೇರಿ
ಪರಿಶಿಷ್ಟ ಪಂಗಡಕ್ಕೆ ಸೇರಿದ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ 20ವರ್ಷಗಳ ಶಿಕ್ಷೆ ವಿಧಿಸಿರುವ ನ್ಯಾಯಾಲಯ, ನೊಂದ ಬಾಲಕಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆಯೂ ಆದೇಶಿಸಿದೆ.
ಅಬ್ದುಲ್ ನಾಸಿರ್ ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪರಿಶಿಷ್ಟ ಪಂಗಡದ ಬಾಲಕಿಯನ್ನು ಸಲುಗೆಯಿಂದ ಮಾತನಾಡಿಸಿ, ಮೊಬೈಲ್ ನಂಬರ್ ನೀಡಿ ನಂತರ ಒಂದು ದಿನ ಆಕೆಯನ್ನು ತನ್ನ ಮನೆಗೆ ಮಧ್ಯರಾತ್ರಿ ಬರಲು ಹೇಳಿದ ಅಬ್ದುಲ್ ನಾಸಿರ್ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದನೆನ್ನಲಾಗಿದೆ.
ಮಗಳು ಮನೆಯಲ್ಲಿಲ್ಲದಿರುವ ಬಗ್ಗೆ ಗಾಬರಿಗೊಂಡ ನೊಂದ ಬಾಲಕಿಯ ತಾಯಿ ಹಾಗೂ ಸಂಬಂಧಿಕರು ಸುಂಟಿಕೊಪ್ಪ ಮತ್ತು ಕುಶಾಲನಗರಗಳಲ್ಲಿ ಹುಡುಕಾಡಿ ಮನೆಗೆ ಹಿಂತಿರುಗಿ ಬಂದ ಅರ್ಧ ಗಂಟೆಯಲ್ಲಿ ನೊಂದ ಬಾಲಕಿ ಮನೆಗೆ ಬಂದಿದ್ದು, ಆಕೆಯನ್ನು ವಿಚಾರಿಸಿದಾಗ ಆಕೆ ತನ್ನ ಮೇಲೆ ಅಬ್ದುಲ್ ನಾಸಿರ್ ಅತ್ಯಾಚಾರ ಮಾಡಿದ ವಿಚಾರವನ್ನು ತಿಳಿಸಿದ್ದಳು.
ಈ ಕುರಿತು ನೊಂದ ಬಾಲಕಿಯ ತಾಯಿ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಸಿದ ಸೋಮವಾರಪೇಟೆ ಉಪ ವಿಭಾಗದ ಅಂದಿನ ಡಿ.ವೈಎಸ್.ಪಿ. ಹೆಚ್.ಎಂ.ಶೈಲೇಂದ್ರ ಅವರು ಆರೋಪಿತನ ವಿರುದ್ಧ ಅತ್ಯಾಚಾರದ ಅಪರಾಧಕ್ಕಾಗಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯು ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ನೊಂದ ಬಾಲಕಿಯ ಸಾಕ್ಷ್ಯ, ವೈದ್ಯಕೀಯ ಸಾಕ್ಷ್ಯ ಹಾಗೂ ಪ್ರಾಸಿಕ್ಯೂಷನ್ ಪರ ಹಾಜರುಪಡಿಸಿದ ಇತರ ಸಾಕ್ಷಾಧಾರಗಳ ಆಧಾರದಲ್ಲಿ ಆರೋಪಿಯು ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪ್ರಶಾಂತಿ ಜಿ. ಅವರು, ಆರೋಪಿ ಅಬ್ದುಲ್ ನಾಸಿರ್’ಗೆ ಪೊಕ್ಸೋ ಹಾಗೂ ಎಸ್.ಸಿ/ಎಸ್.ಟಿ.ಕಾಯ್ದೆಯಡಿ ಅಪರಾಧವೆಸಗಿದ್ದಕ್ಕಾಗಿ 20 ವರ್ಷಗಳ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದೂ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕ ಎನ್.ಪಿ.ದೇವೇಂದ್ರ ಅವರು ವಾದಿಸಿದರು.