ಹೊಸದಿಗಂತ ವರದಿ ಕಾಸರಗೋಡು:
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಂಸ್ಮರಣಾ ಕಾರ್ಯಕ್ರಮವನ್ನು ಆಚರಿಸಲಾಯಿತು. ದೀಪಬೆಳಗಿಸಿ ಉದ್ಘಾಟನೆ ಮಾಡಿದ ಮಿಜೋರಾಂ ಮಾಜಿ ರಾಜ್ಯಪಾಲ, ಬಿಜೆಪಿ ಕೇರಳ ರಾಜ್ಯ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತದ ಅವಧಿಯಲ್ಲಿ ಜಮ್ಮು ಕಾಶ್ಮೀರವೂ ಸೇರಿದಂತೆ ಇಡೀ ಭಾರತದ ಸಮಗ್ರ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದ್ದಾರೆ.
ಒಂದೇ ದೇಶ, ಒಂದೇ ಆಡಳಿತ ವ್ಯವಸ್ಥೆ, ಒಂದೇ ರಾಷ್ಟ್ರಧ್ವಜ ಎಂಬುದು ಬಿಜೆಪಿಯ ನಿಲುವಾಗಿದೆ. ಇದಕ್ಕಾಗಿ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಹೋರಾಡಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಮುಖರ್ಜಿಯವರ ಕನಸನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ನನಸು ಮಾಡಿದೆ ಎಂದು ಕುಮ್ಮನಂ ನುಡಿದರು.